
ನಾನು ಚಿತ್ತಾಲರನ್ನ ಅಕಸ್ಮಾತ್ತಾಗಿ ಓದಿದೆ. ಅಂದ್ರೆ, ನಾನು ಸಾಹಿತ್ಯಾನ ಓದ್ಲಿಕ್ಕೆ ಸುರುಮಾಡಿದಾಗ ನನ್ಗೆ ಈ ನವ್ಯ ಅಥವಾ ನವೋದಯ ಅಥವಾ ಈ ಪ್ರಗತಿಶೀಲ .. ಆತರದ ಯಾವ ಒಂದು ಸಾಹಿತ್ಯದಲ್ಲಿ ಪಂಥಗಳಿದ್ದಾವೆ ಅನ್ನೋದು ಗೊತ್ತಿರಲಿಲ್ಲ. ನಾನು ನನ್ನ ಕೈಗೆ ಸಿಕ್ಕಿದ ಪುಸ್ತಕಗಳನ್ನ ಓದ್ತಾ ಬಂದೆ. ಆಮೇಲೆ ಓದ್ತಾ ಓದ್ತಾ ಓದ್ತಾ ನಂಗೆ ಇಷ್ಟವಾದದ್ದನ್ನ ಹೆಚ್ಚು ಓದಿದೆ. ಅದೇ ರೀತಿ ಆವಾಗ ನಾನು ಯಶವಂತ ಚಿತ್ತಾಲರನ್ನ ಮೊಟ್ಟಮೊದಲ್ನೆ ಸಲ ಓದ್ದಾಗ ನನಗೆ, ಅವರ ಆಟ ಸಂಕಲನ ನಾನು ಮೊದ್ಲು ಓದಿದ್ದು, ಆವಾಗ ನನ್ಗೆ ತುಂಬ ಆಶ್ಚರ್ಯ ಆಯ್ತು. ಆಶ್ಚರ್ಯ ಯಾಕಂದ್ರೆ ನಾನು, ಆವಾಗ ನಾನು ಉತ್ತರಕನ್ನಡದಿಂದ ಬಂದವ್ನು, ಅವ್ರೂ ಉತ್ತರಕನ್ನಡದವ್ರು, ಆವಾಗ ನನ್ನ ಸುತ್ತಲಿನ ಪರಿಸರ ಇಷ್ಟು ಚೆನ್ನಾಗಿ, ಇಷ್ಟು ಬೇರೆಯಾಗಿ ಅವ್ರ ಕತೆಗಳಲ್ಲಿ ಕಾಣಿಸ್ತಾ ಇರ್ಬೇಕಾದ್ರೆ, ಏನು ಅದನ್ನ ಅವರು ನೋಡಿರುವ ರೀತಿಯಲ್ಲಿ ಏನು ಭಿನ್ನತೆ ಇದೆ ಅಂತ ಅನಿಸ್ತು ನನಗೆ. ನನಗೆ ಮೊಟ್ಟ ಮೊದಲ್ನೆ ಸಲ ಈ ನನ್ನೊಳಗೂ ಇನ್ನೊಂದು ಉತ್ತರ ಕನ್ನಡ ಇದೆ, ನನ್ನೊಳಗೂ... ನಾವು ಒಂದೇ ನೆಲವನ್ನ ಹಂಚಿಕೊಂಡಿದ್ರು, ಒಂದೇ ಊರಲ್ಲಿ ನಾವು ಬೆಳೆದಿದ್ರು ನನಗೆ ನಾನು ಕಾಣುವ ಜಗತ್ತು ಬೇರೆ, ಅವ್ರು ಕಾಣುವ ಜಗತ್ತು ಬೇರೆ ಅಂತನ್ನುವಂಥ ಒಂದು... ಅನ್ನೋದು ನನ್ಗೆ ಹೊಳೀತು ಆವಾಗ. ಅದ್ರಿಂದಾಗಿ ನನಗೆ ಹೆಚ್ಚು ಸ್ಫೂರ್ತಿ ಬಂತು ಅಂತ ನಾನು ಹೇಳ್ಬಹುದು. ಅಂದ್ರೆ, ಈ ತರದ, ಅದ್ರಲ್ಲು ಅವರ ಸಂದರ್ಶನ, ಅಬೋಲಿನ್, ಆ ಕತೆಗಳನ್ನ ಓದ್ದಾಗ ನಮ್ಮ ಸುತ್ತಮುತ್ತಲಿನ ಜಗತ್ತು, ಸುತ್ತಮುತ್ತಲಿನ ಕಥೆಗಳು, ಅವುಗಳನ್ನೆ ಕಥೆಯಾಗಿ ನಾನು ಕೂಡ ಹೇಳಬಲ್ಲೆ ಮತ್ತು ಭಿನ್ನವಾಗಿ ಹೇಳಬಲ್ಲೆ ಅಂತ ನನಗೆ ಅನಿಸ್ತು.
ಆಮೇಲೆ ಅವರ ಪ್ರಭಾವದ ಬಗ್ಗೆ ಹೇಳ್ಬೇಕಂದ್ರೆ, ಮೊದ್ಲು ಅದ್ರಿಂದ ನಾನು ತುಂಬ ಪ್ರಜ್ಞಾಪೂರ್ವಕವಾಗಿ ತಪ್ಪಿಸ್ಕೊಂಡೆ. ಅದೂ ನನ್ನ ಮೊದಮೊದಲು ಕೆಲವು ಕತೆಗಳಲ್ಲಿ. ಯಾಕಂದ್ರೆ ಅದು ನನಗೆ, ನಾನು ಉತ್ತರಕನ್ನಡದ ಬಗ್ಗೆ ಬರೀಲಿಕ್ಕೆ ಸುರು ಮಾಡ್ದಾಗ ಅವ್ರು ಉತ್ತರಕನ್ನಡದವ್ರಾಗಿರೋದ್ರಿಂದ ಮತ್ತು ಆಗಲೇ ಅಂದ್ರೆ ನಾನು ಬರೆಯೋ ಹೊತ್ತಿಗಾವಾಗ್ಲೇ ಅವ್ರು ಪ್ರಸಿದ್ಧ ಲೇಖಕರು ಆಗಿದ್ರಿಂದ, ಅವ್ರ ಬರವಣಿಗೆ ಬಗ್ಗೆ, ಅವರು ಉಪಯೋಗಿಸೋ ಕೆಲವು ನುಡಿಗಟ್ಟುಗಳ ಬಗ್ಗೆ, ಅವರು ಉಪಯೋಗಿಸುವ ಕೆಲವು ಶಬ್ದಗಳ ಬಗ್ಗೆ, ಅವೆಲ್ಲವೂ ಜನ್ರಿಗೆ ಅವಾಗ್ಲೇ ಗೊತ್ತಿತ್ತು. ಆಮೇಲೆ ಉತ್ತರಕನ್ನಡ ಅಂದ್ರೆ ಚಿತ್ತಾಲರ ಉತ್ತರಕನ್ನಡ ಅನ್ನೋದು ಮಾತ್ರ ಜನರ ಮನಸ್ಸಲ್ಲಿತ್ತು. ಹಾಗಾಗಿ ನಾನು ಅದನ್ನ ಪ್ರಜ್ಞಾಪೂರ್ವಕವಾಗಿ ಕೆಲವು ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಲಿಲ್ಲ. ಯಾಕಂದ್ರೆ ನನಗೆ ಅವ್ರಿಗಿಂತ ನನ್ನದು ಬೇರೆ ಉತ್ತರಕನ್ನಡ, ನಾನು ನೋಡಿದ ಉತ್ತರಕನ್ನಡ ಬೇರೆ, ನನ್ನ, ನಾನು ನೋಡಿದ ಜಗತ್ತು ಬೇರೆ ಅನ್ನೊದನ್ನ ನನಗೆ ಹೇಳ್ಬೇಕಿತ್ತು. ಆ ಅದೇ ಶಬ್ದಗಳನ್ನ, ನುಡಿಗಟ್ಟುಗಳನ್ನ ಉಪಯೋಗಿಸಿದ್ರೆ, ಜನ ಅದನ್ನ, ಅಥವಾ ಓದುಗರಿಗೆ ಅದು, ಬೇರೆಯಾಗಿ ಅನಿಸದೇ ಹೋಗಬಹುದು. ಭಿನ್ನವಾದ ಒಂದು ಕತೆಯನ್ನ ನಿಮಗೆ ಹೇಳ್ಬೇಕಾದ್ರೆ, ಬೇರೆ ರೀತಿಯಲ್ಲಿ ನಿಮಗೆ ಹೇಳ್ಬೇಕಾದ್ರೆ ಅದಕ್ಕೆ ಬೇರೆದೇ ಒಂದು ಭಾಷೆ ಬೇಕು. ಅಂದ್ರೆ ಕೆಲವನ್ನು ನೀವು ಎತ್ತರದ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ, ಕೆಲವನ್ನ ನೀವು ಕಡಿಮೆ ಧ್ವನಿಯಲ್ಲಿ ಹೇಳ್ಬೇಕಾಗುತ್ತೆ. ಕೆಲವನ್ನ ಹೇಳ್ದೇ ಇರ್ಬೇಕಾಗುತ್ತೆ. ಸೊ, ಈ ಎಲ್ಲ ಕೌಶಲ್ಯಗಳೇನಿದಾವೆ, ಅದನ್ನೆಲ್ಲ ನಾನು ಬರಬರುತ್ತ ರೂಢಿಸಿಕೊಂಡೆ. ಆದ್ರೆ, ನಾನು ಪ್ರಜ್ಞಾಪೂರ್ವಕವಾಗಿ ಮಾಡಿದ್ದೆಂದ್ರೆ, ಚಿತ್ತಾಲರಿಗೇ ವಿಶಿಷ್ಟವಾದ ಕೆಲವನ್ನ ಪ್ರಜ್ಞಾಪೂರ್ವಕವಾಗಿ ಉಪಯೋಗಿಸದೇ ಬಿಟ್ಟೆ.
ಒಂದು ರೀತಿ ನೋಡಿದರೆ ಒಂದು ಸಂಕಲನದಿಂದ ಇನ್ನೊಂದಕ್ಕೆ ಹೋಗುವಾಗ ನೀವು ಮಹತ್ವದ ಬದಲಾವಣೆಗಳನ್ನು, ಬೆಳವಣಿಗೆಯನ್ನು ದಾಖಲಿಸುತ್ತ ಬಂದವರು. ಅಂದರೆ ಪ್ರತಿ ಮೂರನೆಯ ಸಂಕಲನದಲ್ಲಿ ಮೊದಲ ಎರಡರ ಸಮನ್ವಯತೆ, ಹಿಂದಿನದ್ದರ ಅತಿಗಳಿಂದ ಮುಕ್ತಿ ಎದ್ದು ಕಾಣುತ್ತದೆ. ಅಂಕುರದ ಕಾಮ ಮುಂದೆ ತನ್ನ ಜಾಗ ಕಂಡುಕೊಂಡ ಹಾಗೇ, ಲಂಗರುವಿನಲ್ಲಿ ಮನುಷ್ಯ ಸಂಬಂಧಗಳ ತಲ್ಲಣಗಳ ಕುರಿತಾದ ಶೋಧ ನಡೀತು. ಹುಲಿಸವಾರಿ ಸಂಕಲನಕ್ಕೆ ಬರುವ ಹೊತ್ತಿಗೆ ತಮ್ಮ ಕಥಾಲೋಕದ ಆದ್ಯತೆಗಳು ಸಂಪೂರ್ಣವಾಗಿ ಬದಲಾಗಿದ್ದಂತೆ, ಮನುಷ್ಯ ಸಂಬಂಧಗಳ ಒಂದು ಭಾವನಾತ್ಮಕ ಜಗತ್ತಿನಿಂದ ತಾವು ಕಾರ್ಪೋರೇಟ್ ಜಗತ್ತು ಅವನ ಭಾವವಲಯವನ್ನು ಅತಿಕ್ರಮಿಸುತ್ತಿರುವುದರ ಬಗ್ಗೆ ಆಸಕ್ತರಾದ ಹಾಗೆ ಕಾಣಿಸುತ್ತದೆ. ಈ ಬಗೆಯ ಬದಲಾವಣೆಗೆ ಆ ಕಾಲಘಟ್ಟದ ಸ್ಥಿತ್ಯಂತರಗಳು ಕಾರಣವೇ ಅಥವಾ ಸಾಹಿತ್ಯ ಸಮಕಾಲೀನವಾಗಿರಬೇಕೆಂದು ತಮಗೆ ಅನಿಸಿತ್ತೇ? ಯಾಕೆಂದರೆ ಮುಂದೆ ನೀವು ಸಾಧಿಸಿದ ಸಮನ್ವಯತೆಯ ದೃಷ್ಟಿಯಿಂದ, ಮತ್ತೊಬ್ಬನ ಸಂಸಾರ ಗಮನಿಸಿದರೆ ತಿಳಿಯುವ ಹಾಗೆ, ಇದು ಬಹಳ ಮುಖ್ಯವಾದ ಬೆಳವಣಿಗೆ ಅಂತ ಅನಿಸುತ್ತದೆ. ಇದನ್ನು ಸ್ವಲ್ಪ ವಿಶ್ಲೇಷಿಸಬಹುದೆ?
ಅಂದ್ರೆ ಈ ಸಮಕಾಲೀನತೆ ಅನ್ನೋದು ಅದು, ವಸ್ತುವಿನ ಸಮಕಾಲೀನತೆ ಬೇರೆ, ಸಾಹಿತ್ಯದ ಸಮಕಾಲೀನತೆ ಬೇರೆ. ನಾವು ಬರೀಬೇಕಾದ್ರೆ ಪ್ರತಿಯೊಂದು, ಇವತ್ತು ಸೃಷ್ಟಿಯಾದ ಎಲ್ಲಾ ಸಾಹಿತ್ಯವೂ ಸಮಕಾಲೀನವೇ. ಯಾಕಂದ್ರೆ ಬರೆಯುವ ಲೇಖಕನಿಗೆ ಅವನ ಸುತ್ತ ಮುತ್ತಲು ನಡೀತಾ ಇರುವ ವಿದ್ಯಮಾನಗಳು, ಅಲ್ಲಿ ನಡೀತಾ ಇರುವ ಸ್ಥಿತ್ಯಂತರಗಳು, ಅವೆಲ್ಲವೂ ಅವನ ಮೇಲೆ ಪರಿಣಾಮ ಮಾಡೇ ಮಾಡುತ್ತೆ. ಈಗ ರಾಮಾಯಣ ಬರೆದ್ರು ಅದು ಸಮಕಾಲೀನ ಅಂತ್ಲೆ ನಾನು ತಿಳಕೊಂಡಿದೇನೆ. ಯಾಕಂದ್ರೆ ಅದು ವಸ್ತು ಎಷ್ಟೇ ಹಳೇದಿರ್ಬೋದು ಅಥವಾ ವಸ್ತು ಒಂದು ಐತಿಹಾಸಿಕ ಕಾದಂಬರಿಗೆ ಒಂದು ಐನೂರು ವರ್ಷ ಹಳೇದಿರ್ಬೋದು. ಆದ್ರೆ ಇವತ್ತು ಬರೆದಾಗ ಯಾವ್ದನ್ನ ನಾವು ಹೇಳ್ತೀವಿ-ಹೇಳೋದಿಲ್ಲ ಅನ್ನೋದಿದ್ಯಲ್ಲ; ಆಮೇಲೆ, ಯಾವ ರೀತಿಯಿಂದ ಅದನ್ನ ಹೇಳ್ತೀವಿ, ಯಾವುದರ ಮೇಲೆ ಹೆಚ್ಚು ಒತ್ತು ಕೊಡ್ತೀವಿ ಅನ್ನೋದು ನಮ್ಮ ಸುತ್ತಲಿನ ಸ್ಥಿತ್ಯಂತರಗಳಿಂದ, ಸುತ್ತಲಿನ ಸಮಕಾಲೀನ ಘಟನೆಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತೆ. ಅಂದ್ರೆ ಒಬ್ಬ ಲೇಖಕನಿಗೆ ತನ್ನ ಕಾಲವನ್ನ ಬಿಟ್ಟು ಬರೀಲಿಕ್ಕೇ ಶಕ್ಯ ಇಲ್ಲ. ಹಂಗಾಗಿ ಎಲ್ಲವೂ ಸಮಕಾಲೀನ ಅಂತ್ಲೇ ನನ್ನ ಅನಿಸಿಕೆ. ವಸ್ತುಗಳು ಬೇರೆ ಬೇರೆ ಕಾಲಘಟ್ಟದಲ್ಲಿರಬಹುದು. ಕೆಲವು ಒಂದು ನೂರು ವರ್ಷ ಹಳೇದಿರ್ಬೋದು, ಕೆಲವು ಐವತ್ತು ವರ್ಷ ಹಳೇದಿರ್ಬೋದು. ಅದು ಒಂದು, ಯಾವುದನ್ನ ಲೇಖಕ ಹೆಚ್ಚು ಪರಿಣಾಮಕಾರಿಯಾಗಿ ಹೇಳಲಿಕ್ಕೆ ಸಾಧ್ಯ ಅನ್ನೋದರ ಮೇಲಿಂದ ಆಯ್ದುಕೊಂಡಂಥ ಒಂದು, ಅದೊಂದು ಅವನ ಆಯ್ಕೆ ಅದು. ಹೊರತು ಅವನ ಸೆನ್ಸಿಬಿಲಿಟಿಯೇನಿದೆ, ಅದು ಸಮಕಾಲೀನವೇ ಮತ್ತು ಇವತ್ತಿಂದೇ ಅಂತ ನನಗನಿಸುತ್ತೆ. ಹಾಗಾಗಿ ನನ್ನ ಎಲ್ಲ ಕತೆಗಳಲ್ಲೂ ನಾನು ಬರೆದಾಗ ನಾನು ಆಯಾ ಸಮಕಾಲೀನತೆಗೆ ಸ್ಪಂದಿಸುತ್ತಾ ಇದ್ದೇನೆ ಅಂತ್ಲೆ ನಾನು ತಿಳ್ಕೊಂಡು ಬರೆದಿದ್ದೇನೆ. ಅದ್ಕೇನೆ ಕೆಲವು ವಸ್ತುಗಳ ಆಯ್ಕೆಯಲ್ಲಿ ಯಾಕೆ ನಾವು ಎಲ್ಲವನ್ನೂ ಹೇಳುವುದಿಲ್ಲ ಅಥವಾ ಯಾಕೆ ನಾವು ಕೆಲವನ್ನ ಬಿಡ್ತೀವಿ ಅನ್ನೋದು ಒಬ್ಬ ಲೇಖಕನಿಗೆ ಇದು ಸಮಕಾಲೀನ ಅಲ್ಲ ಅಂತ ಅನಿಸ್ತಾ ಇರುತ್ತೆ. ಅಂದ್ರೆ, ಇವತ್ತಿನ ಕಾಲಕ್ಕೆ ಈ ಕತೇನ, ಈ ವಸ್ತುವನ್ನ ಎತ್ತಿಕೊಳ್ಳೋದು ಪ್ರಸ್ತುತವಲ್ಲ ಅಂತ ಅನ್ಸುತ್ತೆ. ಆದ್ರಿಂದ ಅವನದನ್ನ ಬಿಡ್ತಾನೆ. ಹಾಗಾಗಿ ಅವನ ಆಯ್ಕೆ ಏನಿದೆ, ಅದು ಎಲ್ಲವೂ ಸಮಕಾಲೀನವೇ.
ನಿಲುಕು, ಇನ್ನೂಒಂದು, ಮತ್ತೊಬ್ಬನ ಸಂಸಾರ ಮತ್ತು ಥೂ ಕೃಷ್ಣ ಕಥೆಗಳಲ್ಲಿ ವಿಶಿಷ್ಟವಾದ ಒಂದು ಶೋಧವಿದೆ. ಪರಸ್ಪರ ಸಂಬಂಧವಿಲ್ಲವೆಂದು ನಾವು ಮೇಲ್ನೋಟಕ್ಕೆ ಗ್ರಹಿಸುವ ಅನೇಕ ಸಂಬಂಧಗಳಲ್ಲಿ, ಘಟನೆಗಳಲ್ಲಿ, ವ್ಯಕ್ತಿಗಳ ನಡುವೆ ಸುಪ್ತವಾದ-ಗುಪ್ತವಾದ ಏನೋ ಒಂದು ತಂತು ಕೆಲಸ ಮಾಡುತ್ತಿರಬಹುದೆ ಎಂಬ ಅನುಮಾನವೆ ಶೋಧವಾಗಿ ವಿಸ್ತರಿಸಿದಂಥ ಕಥಾನಕಗಳು ಇವು. ನಿಮ್ಮ ಒಟ್ಟಾರೆ ಕತೆಗಳಿಂದ ಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುವಂಥವು. ಈ ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಬಹುದೆ?
ನಿಮ್ಮ ಕತೆಗಳಲ್ಲಿ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳ ಬಗ್ಗೆ ತುಂಬ ಕುತೂಹಲಕರ ಅನಿಸುವಂಥ ಕೆಲವು ಸಂಗತಿಗಳಿವೆ. ಈ ಸ್ತ್ರೀ ಪಾತ್ರಗಳು ವಿಶಿಷ್ಟವಾದವು. ಅದು ಪ್ರೇಮಕ್ಕ(ಪರಸ್ಪರ, ನಿಲುಕು) ಇರಲಿ, ಸರೋಜಿನಿ (ಸುಧೀರನ ತಾಯಿ)ಯಿರಲಿ, ಮುಕ್ತಾ(ಕಾರಣ) ಅಥವಾ ಗೋದಾವರಿ,ಪಂಡರಿ, ಯಮುನೆ, ಕಾವೇರಿ(ಒಂದು ಬದಿ ಕಡಲು) ಯಾರೇ ಇರಲಿ, ಅವರಲ್ಲಿ ವಿಶಿಷ್ಟವಾದ ಒಂದು ತೇಜಸ್ಸಿದೆ. ಕಾರಂತರ ಕಾದಂಬರಿಗಳಲ್ಲಿ ಕಾಣುವಂಥ ಒಂದು ಕೆಚ್ಚು, ಏಕಾಂಗಿಯಾಗಿಯೂ ಬದುಕನ್ನು ಎದುರಿಸಬಲ್ಲ ಮನಸ್ಥಿತಿ ಅವರ ವ್ಯಕ್ತಿತ್ವದಲ್ಲಿ ಸಹಜವಾಗಿಯೇ ಎಂಬಂತೆ ಇದೆ. ವೈವಾಹಿಕ ಬದುಕಿನ ವೈಫಲ್ಯವೋ, ಮದುವೆಯೇ ಇಲ್ಲದೆ ಕಳೆಯಬೇಕಾಗಿ ಬಂದುದೋ, ಸಾಂಸಾರಿಕ ಬದುಕಿಗೆ ಎಲ್ಲೋ ಹೇಗೋ ಎರವಾದ ನೋವೋ ಇವರ ಬದುಕನ್ನು ಆವರಿಸಿದಾಗ್ಯೂ ಇವರು ಅಂಥ ಬದುಕನ್ನು ಜೀವನ್ಮುಖಿಯಾಗಿ, ವಿಶಿಷ್ಟ ಚೈತನ್ಯದಿಂದ ಎದುರಾಗುತ್ತಾರೆ. ಇದು ನೀವು ನೋಡಿದ ನಿಮ್ಮ ಉತ್ತರಕನ್ನಡದ ಪರಿಸರದ ಕೊಡುಗೆ ಅನಿಸುತ್ತದೆಯೇ ಅಥವಾ ತಾಂತ್ರಿಕ ನೆಲೆಗಟ್ಟಿನಲ್ಲಿ ನೀವು ಇಂಥ ಪಾತ್ರಗಳನ್ನ ಸೃಷ್ಟಿಸಿದ್ದೀರ?
ಆಮೇಲೆ ಇದನ್ನ ನಾನು ಯಾವುದೇ ತಂತ್ರವಾಗಿ ಉಪಯೋಗಿಸ್ಲಿಲ್ಲ. ಅಂದ್ರೆ ನಾನು ಈ ಕಥನ ಕೌಶಲ್ಯ ಏನಿದೆ, ಈ craftsmenship ಏನಿದೆಯಲ್ಲ, ಅದು, ಒಂದು ಕತೆಯನ್ನ ಪರಿಣಾಮಕಾರಿಯಾಗಿ ಹೇಳ್ಲಿಕ್ಕೆ ತುಂಬ ಮಹತ್ವದ್ದದು. ಅಂದ್ರೆ ನೀವು ಒಂದು ಕುರ್ಚಿ ಮಾಡಿದ್ರೆ, ಅದಕ್ಕೆ ಮೊಳೆ ಹೊಡೆದ್ಹಾಂಗದು. ಆದ್ರೆ, ಆ ಮೊಳೆ ಕಾಣಿಸ್ಬಾರ್ದು, ಮತ್ತೆ ಚುಚ್ಬಾರ್ದು. ಹಂಗಿರ್ಬೇಕು ತಂತ್ರ. ಅದು, ತಂತ್ರ ನಿಮ್ ಕಣ್ಣಿಗೆ ಹೊಡೆದ್ರೆ, ಆಮೇಲೆ ಅದು bad carpentry ಅದು. ಅಂದ್ರೆ ನಿಮ್ಗೆ ಕತೆ ಹೇಳ್ಲಿಕ್ಕೆ ಬರೋದಿಲ್ಲ ಅಂತ ಅದರರ್ಥ. ಅಥವಾ ನೀವು ಪ್ರಯೋಗಕ್ಕಾಗಿ ಪ್ರಯೋಗಶೀಲತೆ ಮಾಡಿದ್ರೆ, ಏನು ಹೊಸದನ್ನು ಹೊಸಾ ರೀತಿ ಹೇಳ್ಬೇಕಂತ ಮಾಡಿದ್ರೆ, ಆವಾಗ್ಲೂ ಅದು ಕುರ್ಚಿಗೆ ಮೊಳೆ ಕಂಡ್ಹಾಂಗೇನೆ ಅದು. ಅದು ಇರ್ಬೇಕು, ಅದು ಅತ್ಯಗತ್ಯ, ಆದ್ರೆ ಅದು ಕಣ್ಣಿಗೆ ಕಾಣಿಸ್ಬಾರ್ದು, ಕೈಗೆ ತಾಗ್ಬಾರ್ದು. ಆ ತರ ತಂತ್ರ ಇರ್ಬೇಕು.
ನಿಮ್ಮ ಕತೆಗಳನ್ನು ಗಮನಿಸುವಾಗ ಇದೇ ರೀತಿ ಒಬ್ಬ ಪಬ್ಬನ ಪಾತ್ರ ಇರಬಹುದು, ಜನ್ನ ಇರಬಹುದು, ಕ್ರಮೇಣ ಅವನು ಬುಗುರಿಯಾಗ್ತಾನೆ, ಕ್ರಮೇಣ ಒಬ್ಬ ಉಪ್ಪ, ಒಬ್ಬ ಶರವಣ ಆಗ್ತಾನೆ ಅನಿಸ್ತದೆ. ಈ ಒಂದು ವ್ಯಕ್ತಿತ್ವ ಇದೆಯಲ್ಲ, ಒಂದು ರೀತಿಯಲ್ಲಿ ಅವನು ಅಸಹಾಯಕ, ಸ್ವಲ್ಪ ಮೂರ್ಖ, ಸ್ವಲ್ಪ ಮುಗ್ಧ, ಮತ್ತೆ ಸಮಾಜ ಅವನನ್ನು ಬಳಸಿಕೊಳ್ಳುತ್ತ ಇರುವಾಗ್ಲೂ ಅವನು ನಮಗೆ ಬೇರೆ ಇನ್ನೇನನ್ನೋ ತೋರಿಸ್ತಾ ಇರ್ತಾನೆ. ಈ ಪಾತ್ರ ಕೂಡ ನಿಮ್ಮ ಕತೆಯಿಂದ ಕತೆಗೆ ಬೆಳೀತಾ ಬಂದಿದೆ ಅನಿಸ್ತದೆ. ಇದನ್ನ ಸ್ವಲ್ಪ ವಿವರಿಸಬಹುದೆ?
ನಿಮ್ಮ ಒಂದು ಬದಿ ಕಡಲು ಕಾದಂಬರಿಯಲ್ಲಿ ಮೊದಲಿಗೆ ಒಂದು ಮಾತು ಹೇಳಿದ್ದೀರಿ, 'ಬರೆಯುವ ಹೊತ್ತಿಗೆ ಮಹತ್ವದ್ದೆಂದು ಅನಿಸಿದ ಹಲವು ಸಂಗತಿಗಳು ಕಾಲಾಂತರದಲ್ಲಿ ಅದೇ ತೀವೃತೆಯಲ್ಲಿ ಕಾಣಿಸದೇ ಇರುವುದರಿಂದ ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈಹಚ್ಚಲು ಅಳುಕಾಗುತ್ತದೆ' ಅಂತ. ನಿಮ್ಮ ಅಂಕುರದ ಕಥೆಗಳು ಕೂಡ ಇವತ್ತು ಮಸುಕಾಗಿವೆ ಅನಿಸದಿರುವ ಸಂದರ್ಭದಲ್ಲಿ ತಮಗೆ ಇಂಥ ಅನುಮಾನ ಯಾಕೆ ಕಾಡಿತು?
ನಾನು ಆ ಮಾತನ್ನು ಬರ್ದಿದ್ದು ಈ ಕಾದಂಬರಿಯ ಪರಿಷ್ಕರಣೆಯ ಬಗ್ಗೆ. ಅಂದ್ರೆ, ಈ ದೀರ್ಘ ಕಾದಂಬರಿಯನ್ನ ಬರ್ದು ಅದ್ಮೇಲೆ ಅದ್ರ ಒಳ್ಗಡೆ, ಅದು ತುಂಬ ಒಂದು ಸಂಕೀರ್ಣವಾದ ಒಂದು ಕಟ್ಟಡ ಇದೆ ಅದ್ರ ಒಳ್ಗಡೆ. ಅಂದ್ರೆ ಅದಕ್ಕೆ ನೀವು ಆ ಸಂದರ್ಭಗಳನ್ನ, ಅದ್ರ ಅಧ್ಯಾಯಗಳನ್ನ ನೋಡಿದ್ರೆ ಅದು ಬೇರೆ ಬೇರೆ, ವರ್ಷದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಬೆಳಕಿನಲ್ಲಿ, ದಿನದ ಬೇರೆ ಬೇರೆ ಜಾಗದಲ್ಲಿ ಜರಗುವಂಥದ್ದು. ಸೊ, ಅಷ್ಟೊಂದು ಕಾಂಪ್ಲೆಕ್ಸನ್ನ ನಾನು ಮತ್ತೆ, ಅದನ್ನ ಬರೆದು ಒಂದೆರಡು ವರ್ಷ ಬಿಟ್ಟು ಮತ್ತೆ ಅದನ್ನ ಪರಿಷ್ಕರಣೆ ಮಾಡೋದಿದ್ಯಲ್ಲ, ಆವಾಗ ಅದು, ಅದ್ರೊಳಗೆ ಹೋಗ್ಲಿಕ್ಕೇನೇ ಒಂದ್ವಾರ ಬೇಕಾಗುತ್ತೆ. ಅಂದ್ರೆ, ಅದೇ ಮನಸ್ಥಿತಿಯಲ್ಲಿ ಅದ್ನೆಲ್ಲ ನೋಡ್ಲಿಕ್ಕೆ ಆ ಪರಿಸ್ಥಿತಿ, ಅಂಥಾ ಒಂದು process ಇದ್ಯಲ್ಲ, ಅದನ್ನ ಮತ್ತೊಂದ್ಸಲ ಇಂಥಾ ಒಂದು ದೀರ್ಘ ಬರವಣಿಗೆಗೆ ಮತ್ತೊಮ್ಮೆ ಕೈ ಹಚ್ಚಲಿಕ್ಕೆ ಅಳಕಾಗ್ತದೆ ಅಂತ ನಾನು... ಅದು ನನ್ನ ಉದ್ದೇಶ. ಅಂದ್ರೆ ಅದು ಆ ತೀವೃತೆಯಲ್ಲಿ ಕಾಣ್ಸೋದಿಲ್ಲ, ಆ ತೀವೃತೆಯಲ್ಲಿ ಆವಾಗ ನಾವು ಅದು ಅನಗತ್ಯ ಅಂತ ತಿಳ್ಕೊಂಡಿರ್ತೀವಿ, ಅಥವಾ ಬರೆಯುವಾಗ ಏನೋ ಒಂದು ಮನ್ಸಲ್ಲಿರುತ್ತೆ, ಬರೆಯುವಾಗ ಯಾವ್ದಾದರೂ ಕೆಲವು ಮುಖ್ಯ ಅಂತ ಅನ್ಸಿರುವ ಸಂಗತಿಗಳಿರ್ತಾವಲ್ಲ, ಅಂದ್ರೆ ಮುಖ್ಯ ಅಂತ ಕಾದಂಬರಿ ಒಳ್ಗಡೆ; ಅದು ಕಾಲಾಂತರದಲ್ಲಿ, ಈ ಎಲ್ಲ ಬದ್ಲಾವಣೆಗಳಿಂದ ಅದು ಅಷ್ಟು... ಅದು ನಾನು ಬರೆದ ಮಾತು ಆ ಒಟ್ಟು process ಬಗ್ಗೆ, ಅಂದ್ರೆ, process of editing ಬಗ್ಗೆ. ಪರಿಷ್ಕರಣೆಯ ಪ್ರಕ್ರಿಯೆ ಬಗ್ಗೆ ನಾನು ಬರೆದಿದ್ದೆ ಹೊರತು ಒಟ್ಟು ಬರವಣಿಗೆಯ ಬಗ್ಗೆ ಅಲ್ಲ. ಸೊ, ಹಾಗಾಗಿ ಅದು ಅಪಾರ್ಥಕ್ಕೆ ಎಡೆ ಮಾಡಿ ಕೊಡ್ಬಾರ್ದು.
ನಾಟಕ ರಚನೆಯ ನಿಮ್ಮ ಆಸಕ್ತಿಯ ಬಗ್ಗೆ ಸ್ವಲ್ಪ ಹೇಳಿ. ರಂಗಸಾಧ್ಯತೆಗಳ ಕುರಿತು ನಿಮ್ಮ ಪರಿಕಲ್ಪನೆಗಳು, ರಂಗಕೃತಿ (ಟೆಕ್ಸ್ಟ್)ಯಾಗಿ ಮತ್ತು ರಂಗದಲ್ಲಿ ಅದು ಒಂದು ರಂಗ-ಕೃತಿಯಾಗಿ ಬರುವಾಗ ಅದರ ತಾತ್ವಿಕತೆ ಮತ್ತು ಎರಡರ ಸಂತುಲನ ಮಾಡುವಾಗ ನಿಮ್ಮ ಯೋಜನೆಗಳು ಯಾವ ತರ ಇರ್ತವೆ?
ಒಂದು ಕತೆ ಬರೆಯುವುದು ಇನ್ನೊಂದು ಕಾದಂಬರಿ ಬರೆಯೋದು. ಈ ಎರಡರಲ್ಲಿ ಬರವಣಿಗೆಯ ಪ್ರಕ್ರಿಯೆಯ ದೃಷ್ಟಿಯಿಂದ ಏನು ವ್ಯತ್ಯಾಸ? ನಿಮಗೆ ಯಾವುದು ಹೆಚ್ಚು ಇಷ್ಟ?
ಈ ಕತೆ ಅನ್ನೋದು ನಾನು ಯಾವಾಗ್ಲು ಈ ಉದಾಹರಣೆಯನ್ನ ಕೊಡ್ತ ಇರ್ತೇನೆ; ಅದನ್ನು ಶಾಂತಿನಾಥ ದೇಸಾಯಿ ಹೇಳಿದ್ರು. ಅದೇನಂದ್ರೆ, ಕತೆಯಂದ್ರೆ ಒಂದು ಮರದ ಮೇಲೆ ಹತ್ತಿ ಅದ್ರ ಹಣ್ಣು ತಿಂದ್ಹಂಗೆ, ಕಾದಂಬರಿ ಅಂದ್ರೆ ಇಡೀ ತೋಟದಲ್ಲೆ ಓಡಾಡಿ, ನಿಮ್ಗೆ ಬೇಕಾದ ಹಣ್ಣು ಕಿತ್ಹಂಗೆ ಅಂತ. ಅಂದ್ರೆ ನಿಮಗೆ ಹೇಳ್ಬೇಕಾಗಿದ್ದೇನಂದ್ರೆ, ಒಟ್ಟು ಎರಡೂ ಮಾಧ್ಯಮ ಇದ್ಯಲ್ಲ, ಅದಕ್ಕದಕ್ಕೆ ಭಿನ್ನವಾದ ಒಂದು ಜೀವನದೃಷ್ಟಿ ಬೇಕಾಗತ್ತೆ. ಎರಡನ್ನು ಬರೀಬೇಕಾದ್ರೆ ನಮ್ಮ ಮನಸ್ಥಿತಿ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಅದಕ್ಕೆ ಬೇಕಾದ ಲೋಕದೃಷ್ಟಿ ಎಲ್ಲವೂ ತುಂಬ ಭಿನ್ನವಾದದ್ದು. ಆದ್ರಿಂದ ಒಂದು ಕತೆ ಬರೀತ ಬರೀತ ಕಾದಂಬರಿಯಾಗೋದಿಲ್ಲ ಅಥ್ವಾ ಒಂದು ಉದ್ದ ಕತೆ ಕಾದಂಬರಿಯಾಗೋದಿಲ್ಲ. ಕಾದಂಬರಿಗೆ ಬೇಕಾದ, ಕಾದಂಬರಿಗೆ ತುಂಬ ಆಳ ಬೇಕು. ಅಂದ್ರೆ, it is about total experience... ಅಂಥ ಒಂದು ಅನುಭವದ, ಒಂದು ಪೂರ್ಣ ಅನುಭವದ ಅಂಥ ಒಂದು ಮಾಧ್ಯಮ ಅದು. ಆದ್ರೆ ಕತೆ ಅಂದ್ರೆ ಹಾಗಲ್ಲ. ಕತೆ ಅದರ ಅಳತೆ ಚಿಕ್ಕದು, ಆಮೇಲೆ ಅದ್ರಲ್ಲಿ ನೀವು ಹೇಳಬೇಕಾದ ಸಂಗತಿಗಳನ್ನ ಚುರುಕಾಗಿ ಹೇಳ್ಬೇಕು, ಆಮೇಲೆ ಹೀಗೆ... ಅದ್ರಲ್ಲೊಂದು ಇಡೀ ಮಾಧ್ಯಮಾನೇ ಅದು ಬೇರೆ. ಹಾಗಾಗಿ ಕತೆಗಾರನಿಗೆ ಮತ್ತು ಕಾದಂಬರಿಕಾರನಿಗೆ ಇರಬೇಕಾದ ಮನಸ್ಥಿತಿ ಎರಡೂ ಬೇರೆ ಬೇರೆ. ಆಮೇಲೆ ಕಾದಂಬರಿ ಬರೆಯುವಾಗ ಹೆಚ್ಚು ಸಾವಧಾನ ಬೇಕು ಅಂತ ನನಗನಿಸುತ್ತೆ. ಅಂದ್ರೆ ಸಾವಧಾನ ಅನ್ನೋದು ನಾನು ನಿಮಗೆ ಒಂದನ್ನ ತಿಳ್ಕೊಂಡು, ಒಂದನ್ನ ಅರಗಿಸಿಕೊಂಡು, ಒಂದನ್ನ ಸಮಾಧಾನವಾಗಿ ಹೇಳುವ ರೀತಿ. ಸಮಾಧಾನ ಅನ್ನೋದನ್ನ ನೀವು ತುಂಬ metaphoricalಆದ ಅರ್ಥದಲ್ಲಿ ನೀವದನ್ನ ತಗೊಳ್ಬೇಕು. ಸಮಾಧಾನಕರವಾದ ರೀತಿಯಲ್ಲಿ ಅದನ್ನ ಹೇಳ್ಬೇಕು. ಸೊ, ಈ ಎಲ್ಲ ರೀತಿಯಿಂದ ಎರಡೂ ಸಂಪೂರ್ಣ ಭಿನ್ನವಾದ ಮಾಧ್ಯಮಗಳಂತ್ಲೆ ನನಗೆ ಅನ್ಸುತ್ತೆ. ಆಮೇಲೆ ನಾನು ಈ ಕಾದಂಬರಿಗಳನ್ನ ಬರೀತಾ ಇರೋದಿಕ್ಕೂ ಮತ್ತೆ ಆ ತರ ಈ ಕ್ಷೇತ್ರದಲ್ಲಿ ನಾನು ಈಗ ಎರಡು ಕಾದಂಬರಿಗಳನ್ನ ಬರೆಯೋದಿಕ್ಕು ಇದೇ ಒಂದು ಕಾರಣ; ಯಾಕಂದ್ರೆ ಅದು ನನಗೆ ಅದು ಹೆಚ್ಚು space ಕೊಡುತ್ತೆ ಅಂತ ನನಗನಿಸಿದೆ.
ಒಂದು ಸಾಹಿತ್ಯ ಪತ್ರಿಕೆಯನ್ನು ದೀರ್ಘಕಾಲ ನಡೆಸಿಕೊಂದು ಬರುವುದು ಮತ್ತು ಸರಿಯಾಗಿ ನಡೆಸಿಕೊಂಡು ಬರುವುದು; ಸಮಯಕ್ಕೆ ಸರಿಯಾಗಿ ಅದನ್ನ ಓದುಗರಿಗೆ ತಲುಪಿಸಿ, ಆ ಬದ್ಧತೆಯನ್ನ ಉಳಿಸಿಕೊಂಡು ನಡೆಸಿಕೊಂಡು ಬರುವುದು ಎರಡೂ ತುಂಬ ಕಷ್ಟ ಎನ್ನುವಂಥ ಒಂದು ಸಾಮಾನ್ಯ ಆಭಿಪ್ರಾಯ ಇದೆ. ಈಗಾಗಲೇ ಮೂರುವರ್ಷಗಳನ್ನ ಪೂರೈಸಿರುವ ದೇಶಕಾಲದಂಥ ಪತ್ರಿಕೆ ನಡೆಸುವ ಅನುಭವ ಹೇಗಿತ್ತು ಮತ್ತು ದೇಶಕಾಲದ ಸಂಪಾದಕರಾಗಿ ಪತ್ರಿಕೆಯನ್ನು ಮುಂಬರುವ ದಿನಗಳಲ್ಲಿ ವಿಭಿನ್ನವಾಗಿ ರೂಪಿಸುವ ಬಗ್ಗೆ ಯೋಜನೆಗಳೇನಾದರೂ ಇವೆಯೆ?
ನಿಮ್ಮ ಆರಂಭದ ಸಂಚಿಕೆಯಲ್ಲಿ ನೀವು ನಿಮ್ಮ ಸಂಪಾದಕೀಯದಲ್ಲಿ ಒಂದು ಒಳ್ಳೆಯ ಮಾತನ್ನ ಹೇಳಿದ್ರಿ. "ಯಶಸ್ಸು, ಪ್ರಗತಿ, ಜ್ಞಾನ, ಕುಟುಂಬ ಸಂಬಂಧಗಳ ಸಹಜ ಅರ್ಥಗಳನ್ನು ನಮ್ಮಿಂದ ಕಸಿದುಕೊಳ್ಳ ತೊಡಗಿರುವ ಸಂಗತಿಗಳ ಬಗ್ಗೆ ತತ್ಕ್ಷಣದ ಆಸೆ ಮತ್ತು ದೌರ್ಬಲ್ಯಗಳನ್ನು ಮೀರಿದ ಆಳವಾದ ಆಲೋಚನೆ ಇಂದಿನ ಅಗತ್ಯವಾಗಿದೆ." ಅಂತ. ಅಂಥ ಉದ್ದೇಶಗಳನ್ನೆಲ್ಲ ಇಟ್ಟುಕೊಂಡೇ ನೀವು ದೇಶಕಾಲವನ್ನ ಆರಂಭ ಮಾಡಿದ್ರಿ ಅಂತೇನೂ ಅಲ್ಲ, ಆದ್ರೆ, ಮೊದಲ್ನೆ ಉತ್ತರದಲ್ಲಿ ನೀವು ಹೇಳಿದ ಹಾಗೆ, ಮನಸ್ಸಿನ ಒಂದು spaceನ್ನ ವಿಸ್ತರಿಸುವ ನಿಮ್ಮ ಸತತವಾದ ಪರಿಶ್ರಮದಲ್ಲಿ, ದೇಶಕಾಲ ಈ ವರೆಗೆ ಮಾಡಿರೋದ್ರಲ್ಲಿ ನಿಮಗೆ ಸಮಾಧಾನ ಇದೆಯ? ಅಥವಾ ಅದಕ್ಕೆ ಒಳ್ಳೆಯ ಒಂದು ಪ್ರತಿಸ್ಪಂದನ ಜನರಿಂದ ಸಿಕ್ಕಿದೆ ಅಂತನಿಸುತ್ತದೆಯೆ?
ಸಮಾಧಾನ ಇದೆ ನನಗೆ. ಆದ್ರೆ ಇನ್ನೂ ಹೆಚ್ಚಿನ ಕೆಲಸ ಮಾಡ್ಲಿಕ್ಕೆ ಸಾಧ್ಯ ಅಂತ ನನಗನಿಸುತ್ತೆ. ಅಂದ್ರೆ ಕೆಲವು ಸಂಗತಿಗಳನ್ನ ನಾವು, ಅಂದ್ರೆ ಕೆಲವು ಲೇಖನಗಳನ್ನ ನಾವು ಪ್ರಕಟಿಸಿದ್ದೇವೆ. ಕೆಲವು ಕತೆಗಳನ್ನ ಮಾಡಿದ್ದೀವಿ. ಅದು, ಬೇರೆ ಎಲ್ಲೂ ಯಾವ್ದೇ ಒಂದು ಪತ್ರಿಕೆಯಲ್ಲೂ ಪ್ರಕಟವಾಗಲಿಕ್ಕೆ ಸಾಧ್ಯ ಇಲ್ದೇ ಇರುವಂಥದ್ದನ್ನ ಮಾಡುವುದು ಕೂಡ ನಮ್ಮದೊಂದು ಉದ್ದೇಶ ಇತ್ತು. ಅಂದ್ರೆ ಈಗ ಎಷ್ಟೋ ಕಡೆಗಳಲ್ಲಿ ದೀರ್ಘವಾದ ಲೇಖನಗಳನ್ನ ಹಾಕೋದಿಲ್ಲ. ದೀರ್ಘವಾದ ಕತೆಗಳನ್ನ ನಿಮಗೆ ಓದ್ಲಿಕ್ಕೆ ಸಿಗೋದಿಲ್ಲ. ಪುಸ್ತಕಗಳಲ್ಲಿ ಬಿಟ್ರೆ ಬೇರೆ ಎಲ್ಲೂ ಅದೆಲ್ಲ ಸಿಗೋದಿಲ್ಲ. ಆ ತರದ ಕೆಲವು ಅವಕಾಶಗಳು ನಮ್ಮಲ್ಲಿದ್ವು. ಆಮೇಲೆ, ಯಾವಾಗ್ಲು ಅದು, ಹೊಸಬ್ರು ಈ ಪತ್ರಿಕೆಗೆ ಸೇರ್ಕೊಂಡಾಗ, ಹೊಸ ಬರಹಗಾರರು ಬರೀಲಿಕ್ಕೆ ಸುರುಮಾಡ್ದಾಗ ಅವ್ರಿಗೆ ಇದು ನಮ್ದು ಅಂತ ಅನಿಸಿದಾಗ, ಅವ್ರಿಗಿದ್ರಲ್ಲಿ ಒಂದು ಜಾಗ ಇದೆ ಅಂದಾಗ್ಲೇ ಅದಕ್ಕೊಂದು ಜೀವಕಳೆ ಇರುತ್ತೆ. ಯಾವಾಗ್ಲು ಒಂದು ಪತ್ರಿಕೆಗೆ, ಒಂದು ಲೈವ್ಲಿನೆಸ್ ಇರುತ್ತೆ. ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗ್ಬೇಕು ಅಂತನ್ನೋದು ನನ್ನ ಇಷ್ಟ. ಅದಾಗಿಲ್ಲ ಅಂತಲ್ಲ, ಆಗಿದೆ. ಆದ್ರೆ ಇನ್ನೂ ಆಗ್ಬೇಕು. ಆದ್ರೆ ಹಾಗಂತ ಅದನ್ನ ಕೇವಲ ಒಂದು ಅವ್ರನ್ನ ಒಳಗೊಳ್ಳಬೇಕು ಅನ್ನೋ ಕಾರಣಕ್ಕೆ ಎಲ್ಲವನ್ನೂ ಪ್ರಕಟಮಾಡೋದು ಅಂತ ಅಲ್ಲ. ಆದ್ರೆ ಅವ್ರು, ಹೆಚ್ಚು ಹೆಚ್ಚು ಹೊಸಬರು ಬರೀಲಿಕ್ಕೆ ಸುರುಮಾಡ್ದಾಗ, ಹೆಚ್ಚು ಹೆಚ್ಚು ಹೊಸ ರೀತಿಯ ಬರಹಗಳು ಬಂದಾಗ್ಲೆ ಇದಕ್ಕೊಂದು ಸಾರ್ಥಕತೆ ಇದೆ. ಇಲ್ದಿದ್ರೆ ಇದನ್ನ ಸುಮ್ನೆ ಒಂದು ಪತ್ರಿಕೆಯನ್ನ ನಡೆಸೋದ್ರಲ್ಲಿ ಯಾವ ಒಂದು ಹೊಸ ಅರ್ಥವೂ ಇರೋದಿಲ್ಲ. ಆಮೇಲೆ ಎಲ್ಲ ಪತ್ರಿಕೆಗೂ, ನಾನಿದನ್ನ ಆರಂಭಿಸುವಾಗ್ಲೆ ಹೇಳ್ದೆ, ಎಲ್ಲ ಪತ್ರಿಕೆಗಳಿಗೂ ಒಂದು ಅದಕ್ಕು ಒಂದು ಆಯುಷ್ಯ ಅಂತ ಒಂದಿರುತ್ತೆ. ನೀವು ಯಾವ ಸಾಹಿತ್ಯ ಪತ್ರಿಕೆಗಳನ್ನು ನೋಡಿದ್ರು. ಯಾಕಂದ್ರೆ ಅದನ್ನ ಒಂದು ಸಣ್ಣ ಗುಂಪು ನಡೆಸ್ತಾ ಇರುತ್ತೆ. ಆಮೇಲೆ ಅದಕ್ಕೊಂದು ಅದ್ರ intensity ಇದ್ಯಲ್ಲ, ಅದು ತುಂಬಾ ವರ್ಷಗಳ ಕಾಲ ಆ intensityಯನ್ನ ಕಾಯ್ದುಕೊಂಡು ಬರೋದು ಕಷ್ಟ. ಯಾಕೆ ಕಷ್ಟ ಅಂದ್ರೆ ಅದ್ಕೆ ತುಂಬ personal ಆದ timeನ್ನ ನಾವು invest ಮಾಡ್ತಿರ್ತೀವಿ. ಈಗ ನಾನು ಕೂಡ ಅಷ್ಟೆ, ನಾನು ಅಥ್ವಾ ನಮ್ಮ ತಂಡ, personal timeನ್ನ ಅಂದ್ರೆ, ನಾವು personal ಆಗಿ ಬೇರೆ ಏನೋ ಮಾಡ್ಬೇಕಾಗಿರೋ ಹೊತ್ತಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ನಮ್ಮ ಕುಟುಂಬದ ಜೊತೆ ಕಳೀ ಬೇಕಾದ ಕಾಲದಲ್ಲಿ ನಾವೀ ಕೆಲ್ಸ ಮಾಡ್ತಿರ್ತೀವಿ. ಅಂದ್ರೆ ಏನೋ ನಮ್ಮ personal ಆದ ಏನೋ ಒಂದನ್ನ ಕೊಡ್ತಾ ಇರ್ತೀವಿ. ಇದನ್ನ ದೀರ್ಘ ಕಾಲ ಮಾಡೋದು ಭಾಳ ಕಷ್ಟ. ಇದನ್ನ ಕೆಲವು ವರ್ಷಗಳ ವರೆಗೆ ಮಾಡ್ಬೋದು. ಇನ್ನೊಂದು ಏನಂದ್ರೆ, ಈ ಹೊತ್ತಿಗೆ ಬರೀತಾ ಇದಾರಲ್ಲ, ಇವ್ರೆಲ್ಲ ಇದ್ರಲ್ಲಿ ಒಳಗೊಂಡಾಗ, ಅವ್ರದ್ದೂ ಒಂದು intensive ಆದ ಒಂದು period ಇರುತ್ತೆ. ಒಂದು intense ಆದ ಒಂದು ಕಾಲ ಇರುತ್ತೆ. ಈಗಿನ ಲೇಖಕರಿಗೂ. ಅವ್ರು ಬರೀಲಿಕ್ಕಿರ್ಲಿ, respond ಮಾಡೋದಿರ್ಲಿ ಅಥವಾ ಯಾವ ರೀತಿದಿರ್ಲಿ; ಆ ಕಾಲಕ್ಕೂ ಇದಕ್ಕೂ ಒಂದ್ರೀತಿಯ ಸಂಬಂಧ ಇದೆ. ಆದ್ರಿಂದ ನೀವು ಸಾಕ್ಷಿಯನ್ನ ನೋಡಿ, ಅಥವಾ ಋಜುವಾತು ನೋಡಿ. ಅವೆಲ್ಲವೂ ಒಂದು ಉಚ್ಛ್ರಾಯವನ್ನು ತಲುಪಿ, ಆ ಕಾಲಕ್ಕೆ ಅದು ತುಂಬ useful ಆಗಿತ್ತು. ಎಲ್ರು ನಾವಿನ್ನು ಅದನ್ನ ನೆನಸ್ಕೋತೀವಿ, ಅದಿನ್ನು ಎಷ್ಟೋ ಹೊಸ ರೈಟರ್ಸ್ನ್ನು ಬೆಳಕಿಗೆ ತಂದಿತ್ತು. ಲಂಕೇಶ್ ಪತ್ರಿಕೆಯನ್ನು ನೋಡಿ. ಅದಕ್ಕೂ ಒಂದು ಉಚ್ಛ್ರಾಯ ಇತ್ತು. ಹಾಗೆ ಈ ತರ ಅದು ಹೊಸ ಹೊಸ, ಲಂಕೇಶ್ ಪತ್ರಿಕೆ ಸಾಹಿತ್ಯ ಪತ್ರಿಕೆ ಅಂತಲ್ಲ, but, ಈ ರೀತಿಯ ಒಂದು ಸಾಹಿತ್ಯದ ಪತ್ರಿಕೆಯ ಒಂದು ಉಚ್ಛ್ರಾಯ ಇರುತ್ತೆ, ಕೆಲವು ಕಾಲ ಇರುತ್ತೆ. ಅದನ್ನ, ಅದ್ರಿಂದ ಈ ಪತ್ರಿಕೆಗೆ ಕೂಡ ಆ ತರದ್ದೊಂದು ಯಾವ್ದೋ ಒಂದು ಆಯುಷ್ಯ ಇದೆ ಅಂತ ನಾನು ತಿಳ್ಕೊಂಡಿದೀನಿ. ಹಾಗಾಗಿ ಅದೊಂದು eternal, ಆದೊಂದು ಎಲ್ಲ ಕಾಲಕ್ಕು ಇರುತ್ತೆ ಆ ತರದ ಯಾವ್ದೇ ಒಂದು ಕಲ್ಪನೆಗಳಾಗ್ಲಿ ಅಥವಾ ಭ್ರಮೆಗಳಾಗ್ಲಿ ನನ್ಗಿಲ್ಲ.
(ಮೂಲ ಆಡಿಯೋ ಸಂದರ್ಶನವನ್ನು ಕೇಳಲು ದಯವಿಟ್ಟು sampada.net ತಾಣದ podcast ವಿಭಾಗವನ್ನು ಭೇಟಿ ಮಾಡಿ.)
ಕೃತಜ್ಞತೆಗಳು : ಶ್ರೀ ಹರಿಪ್ರಸಾದ್ ನಾಡಿಗ್, ಸಂಪದ ತಾಣದ ಸಂಚಾಲಕರು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ