ಮಹತ್ತಾದುದಕ್ಕೆ ತುಡಿಯುತ್ತವೆ ಎಂದು ಮುಗಿಸಬೇಕು.
ಎದೆಯ ತುಮುಲಾಗಿ ಮೊರೆದು
ಹಾಯಾಗಿ ಹಾಡಾಗಿ ಹರಿದು
ಅಂತರಂಗದ ಕವಾಟ ತೆರೆದು
ನೆಲದ ಹೂವಾಗಿ ಅರಳಿ
ಆತ್ಮ ಆತ್ಮ ಮಥನಿಸಿ, ಧ್ಯಾನಿಸಿ
ಬೆಳಗ ಬೆಳಗು ಕೂಡಿ
ಬಯಲ ಬಯಲು ಸೇರಿ
ಅಂಗ ಸಂಗವ ಮರೆತು
ಬಯಲಾಗಲಿಲ್ಲ ಬತ್ತಲೆಗೆ
ಜಂಗಮಗಿತ್ತಿ ಚೆನ್ನ ನೀ ಕೇಳಣ್ಣ!
ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು
ಹಡಗು ಸೆಳೆದ ಕಡಲ ಅಲೆ
ಬಯಕೆಯ ಬಾಯಿ ಹಸಿದ ಶಿಲೆ
ಹಾಸಿಗೆ ಬದಲಿಸುವ ಪಾಪದ ಖಾಯಿಲೆ
ಮಾಯದ ಮರ ಏರಿದ ಜಗದ ಕಲೆ
ಸರಸ ವಿರಸದ ನಕಲಿ ಸೆಲೆ
ಪತ್ರಿಕೆಯಲ್ಲಿ ಅಚ್ಚಾಗಿವೆ
ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು
ಆಳ ಕಾಣದ
ಕಗ್ಗಾಡಿನ ಒಳಗೆ ಝೀಂಗುಡುವ
ನಿಗೂಢತೆಗೆ ಮೌನ ತಬ್ಬಿ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.
- ಈ ಕವಿತೆಯನ್ನು ಸೂಕ್ಷ್ಮವಾಗಿ ಗಮನಿಸಿ.
ಪತ್ರಿಕೆಯಲ್ಲಿ ಅಚ್ಚಾಗಿವೆ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.
- ಎಂದು ಇದನ್ನು ಓದಬಹುದು. ಅಥವಾ,
(ನದಿಗಳಿಗೆ ಹರಿಯ ಬಿಡುವ ಕೊಳಚೆ ನೀರಿನ ನೆನಪು ತರುವ) ಸಿಂಗಾರಗೊಂಡ ಕಪ್ಪು ನದಿಗಳು
(ಅದಕ್ಕೇ ಜೋಡಿಕೆಯಾಗುವ) ಆಳ ಕಾಣದ (ಎಂಬ ಶಬ್ದ)
ಸಿಂಗಾರಗೊಂಡ ಆಳ ಕಾಣದ ಕಪ್ಪು ನದಿಗಳು (ಎಂದೂ ಓದಬಹುದು)
ಅಥವಾ,
ಪತ್ರಿಕೆಯಲ್ಲಿ ಅಚ್ಚಾಗಿವೆ
ಆಳ ಕಾಣದ ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು
- ಎಂದೂ ಓದಬಹುದು. ನದಿಗಳು ಪತ್ರಿಕೆಯಲ್ಲಿ ಅಚ್ಚಾಗುವುದು, ಒಂದು ರೂಪಕವಾಗಿ ಚೆನ್ನಾಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ
ಯಾವುದೇ ಪುಸ್ತಕ ಚೆನ್ನಾಗಿದೆ ಅಥವಾ ಇಲ್ಲ ಅನಿಸುವುದು ವ್ಯಕ್ತಿಗತ ಎಂದು ನಾನು ಬಲವಾಗಿ ನಂಬಿದವನು. ನಾನು ನನ್ನ ಬಾಲ್ಯ, ನನ್ನ ಹೆತ್ತವರು-ಒಡಹುಟ್ಟಿದವರು ಮಾತ್ರವಲ್ಲದೆ ನನ್ನ ಮನೆಯ ಎಲ್ಲ ಸದಸ್ಯರು (ತಾಯಿಯ ತವರಲ್ಲಿ ಬೆಳೆದಿರಬಹುದು, ತಂದೆಯ ಮನೆಯಲ್ಲಿ ಅಜ್ಜ-ಅಜ್ಜಿ-ಚಿಕ್ಕಪ್ಪ ಮುಂತಾಗಿ ಹಲವರಿರಬಹುದು, ಇಲ್ಲದಿರಬಹುದು), ಆಸುಪಾಸಿನ ಮನೆಗಳು ಮತ್ತು ಜನ (ಕೆಲವೆಡೆ ಒಂದೇ ಜಾತಿಯವರು, ಧರ್ಮದವರು ಇದ್ದು ಇಡೀ ಕೇರಿಯೇ ಒಂದು ಮನೆಯಂತಿರುತ್ತದೆ. ಎಲ್ಲ ಕಡೆ ಹಾಗಿರುವುದಿಲ್ಲ.), ಊರು, ಅಲ್ಲಿನ ಪರಿಸರ (ಗದ್ದೆಗಳು, ಕಾಡು, ಶಾಲೆ, ಆಸ್ಪತ್ರೆ, ರೇಶನ್ ಅಂಗಡಿ, ಬಾಲವಾಡಿ, ಯುವಕ ಮಂಡಲ, ಅದರ ವಾರ್ಷಿಕೋತ್ಸವ, ಕೆರೆ, ನಾಗಬನ, ದೈವದ ಮನೆ, ಕೋಲ, ಕಬ್ಬು ಅರೆದು ಬೆಲ್ಲ ತಯಾರಿಸುವ ಆಲೆಮನೆ, ದೇವಸ್ಥಾನ, ಅದರ ಜಾತ್ರೆ, ಗಣೇಶೋತ್ಸವ) ಒಟ್ಟಾರೆ ಊರಿನ ಸಮಾಜ (ಒಂದು ಊರಿನಲ್ಲಿ ಮುಸಲ್ಮಾನರ ಕೇರಿ, ಹರಿಜನರ ಕೇರಿ, ಬಳಗಾರರ ಕೇರಿ, ಶೆಟ್ಟಿಗಾರರ ಕೇರಿ ಎಂದೆಲ್ಲ ಇರಬಹುದು ಅಥವಾ ಇಲ್ಲದೆಯೂ ಇರಬಹುದು), ಅಲ್ಲಿನ ನನ್ನ ಮತ್ತು ಉಳಿದವರ ಬದುಕು ಒಂದು ಗಟ್ಟಿಯಾದ ಮನಸ್ಥಿತಿಗೆ ಕಾರಣವಾಗಿರುತ್ತದೆ. ಅದು ನನ್ನ ಗ್ರಹಿಕೆ, ಸಂವೇದನೆ, ಸೂಕ್ಷ್ಮಗಳನ್ನೆಲ್ಲ ನಿರ್ಧರಿಸುತ್ತದೆ, ನನಗೇ ತಿಳಿಯದಂತೆ. ಮುಂದೆ ಬೆಳೆದಂತೆಲ್ಲ ನಾನು ಹಾಯುವ ಅನುಭವ, ಎದೆಯ ಮೇಲೆ ಕಾಲೂರಿ ಸರಿದ ತುಳಿತದ ಗುರುತುಗಳು, ಹೆಗಲ ಮೇಲಿಟ್ಟ ಕೈಗಳ ಬಿಸುಪು, ಕೆನ್ನೆಗೆ ಬೀಸಿದವರ ಕಿಚ್ಚು, ಕೈಲಿಲ್ಲದ, ಕೈಲಾಗದ, ಕೈಸೋತ ನೂರು ಅಪಮಾನ, ಹಂಗಿಸುವಿಕೆ, ನಿರಾಸೆ ಎಲ್ಲವೂ ಸೇರಿ ಗಳಿಸಿದ್ದು, ಜಯಿಸಿದ್ದು, ಎದೆ ಸೆಟೆಸಿ, ತಲೆಯೆತ್ತಿ ಮೆರೆದಿದ್ದು ನನ್ನ ಗ್ರಹಿಕೆ (perception and conception) ಮತ್ತು ಸೂಕ್ಷ್ಮ ಸಂವೇದನೆಗಳನ್ನು ಶ್ರೀಮಂತಗೊಳಿಸುವುದು ಅಥವಾ ಹಾಗೆ ಮಾಡಲು ವಿಫಲವಾಗುವುದು ಆ ಮೂಲ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವೊಂದು ನಮಗೆ ದಕ್ಕುತ್ತದೆ, ಹಲವಷ್ಟು ದಕ್ಕುವುದೇ ಇಲ್ಲ ಮಾತ್ರವಲ್ಲ ದಕ್ಕದೇ ಹೋದದ್ದರ ಅರಿವೂ ಎಷ್ಟೋ ಬಾರಿ ನಮಗೆ ಆಗುವುದಿಲ್ಲ. ದಕ್ಕಿದ್ದನ್ನು ಅಲ್ಲಲ್ಲೇ ಮರೆಯುತ್ತೇವೆ.
ಏನನ್ನಾದರೂ ಓದಿದಾಗ ಅಥವಾ ನೋಡಿದಾಗ ಅದು ನಮಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅನಿಸಲು ಇದೇ ಕಾರಣ. ಅಂದರೆ, ನಾವು ಓದುವ, ನೋಡುವ ಎಲ್ಲವನ್ನೂ ನಮ್ಮ ಅನುಭವಕ್ಕೆ, ಗ್ರಹಿಕೆಗೆ, ಸಂವೇದನೆಗಳಿಗೆ ಕನೆಕ್ಟ್ ಮಾಡುತ್ತ, ಮಾಡಲು ಸಫಲವಾಗುತ್ತ ಅಥವಾ ವಿಫಲವಾಗುತ್ತ ಅದನ್ನು ದಕ್ಕಿಸಿಕೊಳ್ಳಲು ಗೆಲ್ಲುತ್ತೇವೆ ಅಥವಾ ಸೋಲುತ್ತೇವೆ. ಮತ್ತು ಗೆದ್ದರೆ ಚೆನ್ನಾಗಿದೆ ಎನ್ನುತ್ತ ಸೋತರೆ ಚೆನ್ನಾಗಿಲ್ಲ ಎನ್ನುತ್ತ ನಮ್ಮ ಗೆಲುವು ಅಥವಾ ಸೋಲನ್ನು ಆ ಪುಸ್ತಕ ಅಥವಾ ದೃಶ್ಯಕ್ಕೆ ಆರೋಪಿಸಿ ಕೈತೊಳೆದುಕೊಳ್ಳುತ್ತೇವೆ. ಓದುಗನ ಮಟ್ಟಿಗೆ ಇದು ಎಷ್ಟು ಸತ್ಯವೋ, ಬರಹಗಾರನಿಗೂ ಅಷ್ಟೇ ಸತ್ಯ. ಇದು ಎಲ್ಲ ಕ್ರಿಯೇಟಿವಿಟಿಯ ಇತಿ ಮತ್ತು ಮಿತಿ, ಓದಿನದ್ದು ಮತ್ತು ಬರವಣಿಗೆಯದ್ದು. ಅವನು ಬರೆಯುತ್ತ ಗೆದ್ದಿದ್ದೇನೆ ಅಥವಾ ಸೋತಿದ್ದೇನೆ ಎಂಬ ಭ್ರಮೆಗೆ ಬೀಳುವುದು ಕೂಡಾ ಹೀಗೆಯೇ. ಹಾಗಾಗಿ ಅವನಿಗೆ ವಿಮರ್ಶಕರ ಸರ್ಟಿಫಿಕೇಟ್ ಬೇಕೆನಿಸುತ್ತದೆ. ‘ನಿಮ್ಮ ಮಾತು ನನಗೆ ತುಂಬ ಮುಖ್ಯ ಸಾರ್!’ ಎನ್ನುವ ಪ್ರತಿಯೊಬ್ಬ ಲೇಖಕನೂ ಅಪ್ಪಟ ಸುಳ್ಳು ಹೇಳುತ್ತಿರುತ್ತಾನೆ. ಅವನಿಗೆ ನಮ್ಮ ಮಾತಲ್ಲ ಮುಖ್ಯ, ತನ್ನ ಗೆಲುವಿನ ಕುರಿತಾದ ಅವನ ಅನುಮಾನ ದೂರ ಮಾಡಿ, ಇಲ್ಲಾ ಮಹರಾಯ, ನೀನು ನಿಜಕ್ಕೂ ಗೆದ್ದಿದ್ದೀಯ ಎನ್ನುವ ಮಾತು ಮಾತ್ರ ಮುಖ್ಯ. ಇದನ್ನು ಅರಿಯದೇ ವಿಮರ್ಶಕ ಬೀಗುತ್ತಿರುತ್ತಾನೆ, ಬಿಡಿ.
Art is to Connect ಎನ್ನುತ್ತಾನೆ E M Forster. ಸುಮಿತ್ ಮೇತ್ರಿಯವರು ತಮ್ಮ ಹೆಚ್ಚಿನೆಲ್ಲಾ ಕವಿತೆಗಳಲ್ಲಿ ಇದನ್ನು ಅದ್ಭುತವಾಗಿ ಮಾಡುತ್ತಾರೆ. ಹಾಗೆ ಮಾಡುತ್ತಲೇ ಅವರು ನಮ್ಮ ಇಡೀ ಬದುಕಿನ ಸ್ಮೃತಿಗಳಿಗೆ ಒದಗಿಸುವ ಒಂದು ಕಾಂಟ್ರಾಸ್ಟಿನಲ್ಲೇ ಅಬ್ಬಾ ಅನಿಸಬಲ್ಲ ಒಂದು ನೋಟವನ್ನು ಒದಗಿಸುವ ಕಾಣ್ಕೆ ಕೊಡುತ್ತಾರೆ. ಇವರ ಕವನ ಸಂಕಲನ ತೆರೆದು ಮೊದಲ ಕೆಲವು ಕವಿತೆಗಳನ್ನು ಓದುತ್ತಿರುವಂತೆಯೇ ನಮ್ಮ ಗ್ರಹಿಕೆಗೆ ಬರುವ ಸಂಗತಿಯಿದು. ಇದಕ್ಕಾಗಿ ಮೇಲಿನ ಪ್ಯಾರಾ ಬರೆದೆ. ನಲವತ್ತು ಐವತ್ತು ವರ್ಷಗಳಲ್ಲಿ ನಾವು ಬದುಕಿನಲ್ಲಿ ಸಾಕಷ್ಟು ಕಂಡಿರುತ್ತೇವೆ. ಅವೆಲ್ಲ ನಮ್ಮ ಗ್ರಹಿಕೆಗೆ ಬಂದು, ಅನುಭವ ರಕ್ತಗತವಾಗಿ ನಮ್ಮ ಸಂವೇದನೆಗೆ ಸೇರಿ ಹೋಗಿರುತ್ತವೆ. ಹಾಗಾಗಿ ಈಗ ನಮಗೆ ಕೆಲವೊಂದು ತಕ್ಷಣವೇ ಅರ್ಥವಾದರೂ ಅದನ್ನು ಏನೆಂದು ವಿವರಿಸುವ ಅಗತ್ಯ ಕಾಣುವುದಿಲ್ಲ. ಆದರೆ ನಮಗಿಂತ ಎಳೆಯರಿಗೆ ಅದನ್ನೆಲ್ಲ ವಿವರಿಸುವ ತಾಳ್ಮೆ, ಅಗತ್ಯ, ಆಸೆ ಎಲ್ಲವೂ ಇರುತ್ತದೆ. ವಯಸ್ಸಾದಂತೆಲ್ಲ ನಾವು ಹೆಚ್ಚು ಮೌನವಾಗುತ್ತೇವೆ, ನಮ್ಮ ಗದ್ದಲ ಕಡಿಮೆಯಾಗುತ್ತದೆ. ಆದರೆ ಸಿಂಗಲ್ ಮೆಮರಿಗೆ ಬಹಳಷ್ಟನ್ನು ಒಮ್ಮೆಗೇ ನೆನಪಿಸಿಕೊಳ್ಳಬಲ್ಲ ತಾಕತ್ತು ಇರುವುದಿಲ್ಲ ಎನ್ನುತ್ತಾನೆ ಮಿಲನ್ ಕುಂದೇರಾ. ಅವನಿದನ್ನು ಒಂದು ಕಾದಂಬರಿಯ ಸಕಲೆಂಟು ಸೌಭಾಗ್ಯಗಳನ್ನು ಸಿಂಗಲ್ ಮೆಮರಿಯಲ್ಲಿ ನೆನಪಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮಾತನಾಡುತ್ತ ಹೇಳುತ್ತಾನೆ. ನಾವು ಅದನ್ನು ಇಲ್ಲಿ, ಸುಮಿತ್ ಮೇತ್ರಿಯವರ ಕವನಗಳು ಒಡ್ಡುತ್ತಿರುವ ಸವಾಲಿನೆದುರು, ಗಮನಿಸಬಹುದು. ನೀವು ಪರಸ್ಪರ ಸಂಬಂಧ ಇಲ್ಲದ್ದು ಅನಿಸುವಂಥ, ಆದರೆ ಎಲ್ಲೋ ಯಾವುದೋ ತಂತು ಕೆಲಸ ಮಾಡುತ್ತಿರುವಂತೆಯೂ ಕಾಣುವ ಎರಡು ಮೂರು ತುಣುಕುಗಳನ್ನು ಹೀಗೆ ಜೋಡಿಸಿ ಸಿಂಗಲ್ ಮೆಮರಿಗೆ ದಬ್ಬಿದಾಗ ಹುಟ್ಟುವ ಶಾಕ್ ಏನಿದೆ, ಅದನ್ನು ಸುಮಿತ್ ಮೇತ್ರಿಯವರ ಸಂಕಲನದ ಮೊದಲ ಕೆಲವು ಕವಿತೆಗಳು ಮಾಡುತ್ತವೆ. ಅಷ್ಟನ್ನೇ ಹೇಳಿದರೆ ನಾನು ತಪ್ಪು ಮಾಡಿದಂತಾಗುತ್ತದೆ. ಸುಮಿತ್ ಮೇತ್ರಿಯವರು ಇದನ್ನು ತಮ್ಮ ಕಾವ್ಯ ಪ್ರತಿಭೆಯನ್ನು ಮೆರೆಯುತ್ತಲೇ ಇದನ್ನು ಮಾಡುತ್ತಾರೆ ಎನ್ನಬೇಕು. ಏಕೆಂದರೆ, ಮುಂದೆ ನಾನು ಹೇಳಲಿರುವ ಮಾತಿಗೆ ಇದು ತುಂಬ ಅಗತ್ಯ.
ಸುಮಿತ್ ಮೇತ್ರಿಯವರ ಕವಿತೆಗಳಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಲಕ್ಷಣವೆಂದರೆ ಇವರು ಬಳಸುವ ತುಂಡು ತುಂಡು ಪದ ಗುಚ್ಛಗಳು ಅಥವಾ ಪ್ರತಿಮೆಗಳು. ಈ ತುಂಡು ತುಂಡು ಪದಗುಚ್ಛಗಳು ಅಥವಾ ಪ್ರತಿಮೆಗಳು ಅಥವಾ ಚಿತ್ರಗಳು ಅವರ ಒಟ್ಟು ಕವಿತೆಯ ಕ್ಯಾನ್ವಾಸಿನ ಮೇಲೆ ಮೂಡಿಸುವ ಆಕೃತಿಯೇನಿದೆ ಅದಕ್ಕೆ ಒಂದು ಮಟ್ಟಿನ ಏಕಸೂತ್ರ ಅಗತ್ಯ. ಏಕೆಂದರೆ ಓದುಗ ಅದನ್ನು ದಕ್ಕಿಸಿಕೊಳ್ಳುವಲ್ಲಿ ಮುಖ್ಯವಾಗುವುದು ಅದೇ ಏಕಸೂತ್ರ ಎಂಬ ಕಾರಣಕ್ಕೆ. ಆದರೆ ಕೊಲಾಜ್ ನಿರ್ಮಿಸುವ ಕಲಾಕಾರನಿಗೆ ಸಾಮಾನ್ಯವಾಗಿ ಇರುವ ಆಸಕ್ತಿ ಏಕಸೂತ್ರದ್ದಲ್ಲ, ಬದಲಿಗೆ ಕಾಂಟ್ರಾಸ್ಟಿನದೇ. ಆದರೆ, ಕಾಂಟ್ರಾಸ್ಟ್ ಕೂಡ ಒಂದು ಬಗೆಯ ಏಕಸೂತ್ರವೇ ಎನ್ನುವುದನ್ನು ಮರೆಯದಿರೋಣ. ಇದನ್ನು ತುಂಬ ಅದ್ಭುತ ಎನ್ನುವಂತೆ ಸುಮಿತ್ ಮೇತ್ರಿಯವರು ತಮ್ಮ ಕವನಗಳಲ್ಲಿ ಮಾಡುತ್ತ ಹೋಗುತ್ತಾರೆ. ಹಾಗಿದ್ದೂ ಸುಮಿತ್ ಮೇತ್ರಿಯವರ ತಂತ್ರ ಎಲ್ಲ ಕಡೆ ಫಲಿಸುತ್ತದೆ ಎನ್ನುವಂತಿಲ್ಲ. - subject however to the above said ಇತಿ ಮತ್ತು ಮಿತಿ. ಇದನ್ನು ಎರಡು ಉದಾಹರಣೆಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ.
ಈ ಸಂಕಲನದ ಮೊದಲ ಕವಿತೆ ‘ ಲೋಕಾಂತ ಮೀರಿದ ನೋವು’ ಗಮನಿಸಿ. ಇಲ್ಲಿ ರಾಧೆ, ದ್ರೌಪದಿ, ಸಾವಿತ್ರಿ, ಮೀರಾ, ಊರ್ಮಿಳೆ ಮತ್ತು ಸೀತೆ ಸಾಲಾಗಿ ಬರುತ್ತಾರೆ. ನಂತರ ಬರುವ ಚರಣ ಇದು:
ಎದೆಯ ತುಮುಲಾಗಿ ಮೊರೆದು
ಹಾಯಾಗಿ ಹಾಡಾಗಿ ಹರಿದು
ಅಂತರಂಗದ ಕವಾಟ ತೆರೆದು
ನೆಲದ ಹೂವಾಗಿ ಅರಳಿ
ಆತ್ಮ ಆತ್ಮ ಮಥನಿಸಿ, ಧ್ಯಾನಿಸಿ
ಬೆಳಗ ಬೆಳಗು ಕೂಡಿ
ಬಯಲ ಬಯಲು ಸೇರಿ
ಅಂಗ ಸಂಗವ ಮರೆತು
ಬಯಲಾಗಲಿಲ್ಲ ಬತ್ತಲೆಗೆ
ಜಂಗಮಗಿತ್ತಿ ಚೆನ್ನ ನೀ ಕೇಳಣ್ಣ!
ಅಕ್ಕನನ್ನು ಈ ಇಡೀ ಕವಿತೆಯ ಅಂತಸ್ಸ್ಫೂರ್ತಿಗೆ ಜೋಡಿಸುವಲ್ಲಿ ಮೆರೆಯುವ ಕಾವ್ಯಗುಣವೇ ಈ ಚರಣದಲ್ಲೂ ಮೆರೆದಿದೆ. ಮಾತ್ರವಲ್ಲ, ಎಲ್ಲಿಯೂ ಅಕ್ಕನ ಹೆಸರನ್ನೇ ಎತ್ತದೆ ಇಲ್ಲಿ ಅಕ್ಕನನ್ನು ಕಾಣಿಸಲಾಗಿದೆ ಕೂಡ. ಇಂಥ ಅನೇಕ ಕಾವ್ಯಾತ್ಮಕ ಅಂಶಗಳನ್ನು ಮುನ್ನುಡಿ ಬರೆದಿರುವ ಕೇಶವ ಮಳಗಿಯವರೂ, ಬೆನ್ನುಡಿ ಬರೆದಿರುವ ಕೆ ವಿ ತಿರುಮಲೇಶರೂ ಗಮನಿಸಿ ಮೆಚ್ಚಿದ್ದಾರೆ. ಸಂಕಲನದ ಉದ್ದಕ್ಕೂ ನಮಗೆ ಇಂಥ ಚಮತ್ಕಾರ ಮತ್ತು ಕಾವ್ಯಗುಣ ಬೆರೆತ ಕವಿತೆಗಳು ಮತ್ತೆ ಮತ್ತೆ ಸಿಗುತ್ತವೆ.
ಈಗ ಇದನ್ನು ಗಮನಿಸಿ. ಇದು ‘ಹಸಿದ ಶಿಲೆ’ ಎಂಬ ಕವಿತೆ:
ಹಡಗು ಸೆಳೆದ ಕಡಲ ಅಲೆ
ಬಯಕೆಯ ಬಾಯಿ ಹಸಿದ ಶಿಲೆ
ಹಾಸಿಗೆ ಬದಲಿಸುವ ಪಾಪದ ಖಾಯಿಲೆ
ಮಾಯದ ಮರ ಏರಿದ ಜಗದ ಕಲೆ
ಸರಸ ವಿರಸದ ನಕಲಿ ಸೆಲೆ
ಕವಿತೆಯನ್ನು ತುಂಡು ತುಂಡಾಗಿ ಕೋಟ್ ಮಾಡುವುದರ ವಿರೋಧಿ ನಾನು. ಕೋಟ್ ಮಾಡುವುದಾದರೆ ಇಡೀ ಕವಿತೆಯನ್ನು ಮಾಡುವುದು ಸರಿ. ಇಲ್ಲವಾದಲ್ಲಿ ಸಂವೇದನೆ ಮರೆಯಾಗುತ್ತದೆ ಎನ್ನುವುದು ನಿಜ. ಆದರೆ ಇಲ್ಲಿ ಇಡಿ ಮತ್ತು ತುಂಡು ಒಟ್ಟಾಗಿ ಕೊಡಬೇಕಾಗಿರುವ ಏಕಸೂತ್ರದ ಸಂವೇದನೆಯ ಬಗ್ಗೆಯೇ ಮಾತನಾಡುತ್ತಿರುವುದರಿಂದ ಇದು ತಪ್ಪಾಗುವುದಿಲ್ಲ ಎಂದುಕೊಳ್ಳುತ್ತೇನೆ. ಈ ಚರಣದಲ್ಲಿ ಕವಿಗೆ ಪ್ರತಿ ಸಾಲನ್ನೂ ‘ಲೆ’ ಎಂಬ ಸ್ವರದೊಂದಿಗೇ ಮುಗಿಸಬೇಕೆಂದಿತ್ತೆ? ಗೊತ್ತಿಲ್ಲ. ಅದಿರಲಿ, ಈ ಚರಣದ ಪ್ರತಿ ಸಾಲೂ ನಮ್ಮಲ್ಲಿ ಉದ್ದೀಪಿಸುವ ಚಿತ್ರ/ಪ್ರತಿಮೆ/ಸಂವೇದನೆ/ಭಾವ ವಿಭಿನ್ನವಾಗಿದೆ. "ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು" ಎನ್ನುವುದು ಒಂದು ಉನ್ನತ ಪ್ರತಿಮೆ. ಇಲ್ಲಿ ನೆಲವೇ ಏನನ್ನೋ ಹೇಳಲು ಇರುವೆಗೂಡಿನ ತನ್ನ ಬಾಯಿಯ ಮೂಲಕ ಪ್ರಯತ್ನಿಸುತ್ತಿದೆಯೇನೋ ಎಂಬ ಕಲ್ಪನೆ ತುಂಬ ಆಪ್ತವಾಗುತ್ತದೆ. ಆದರೆ ಮುಂದಿನ ಸಾಲು ಕಡಲ ಅಲೆ ಹಡಗನ್ನು ಸೆಳೆದ ಬಗ್ಗೆ ಇದೆ. ತದನಂತರದ ಸಾಲೇ ಹಸಿದ ಶಿಲೆ (ಕವನದ ಶಿರೋನಾಮೆ)ಯ ಬಗ್ಗೆ ಹೇಳುತ್ತಿದೆ. "ಬಯಕೆಯ ಬಾಯಿ ಹಸಿದ ಶಿಲೆ". ಈಗ ಇರುವೆಗೂಡಿನ ಬಾಯಿ ಒಮ್ಮೆಗೇ ಬಯಕೆಯ ಬಾಯಿಯೂ ಆಯಿತು. ಇಲ್ಲಿ ಬಯಕೆ ಯಾರದ್ದು? ನೆಲದ ಬಯಕೆಯೆ? ನೆಲದ ಬಯಕೆಯೇ ಅದರ ಹಸಿವಾಗಿ ಶಿಲೆಯಾಗಿದೆಯೆ?
ಮುಂದಿನ ಸಾಲು "ಹಾಸಿಗೆ ಬದಲಿಸುವ ಪಾಪದ ಖಾಯಿಲೆ"ಯ ಬಗ್ಗೆ ಹೇಳುತ್ತಿದೆ. ಇದೀಗ ನೆಲದ ಮಾತು ಮರೆಗೆ ಸರಿಯಿತು. ‘ಪಾಪ’ದ ‘ಕಾಯಿಲೆ’, ‘ಹಾಸಿಗೆ’ ಎಲ್ಲವೂ ಬಯಕೆ ತೋಟದ ಬೇಲಿಗಳ ಬಗ್ಗೆ, ಕರಣಗಳ ರಿಂಗಣದ ಬಗ್ಗೆ ಹೇಳುತ್ತಿದೆ ಅನಿಸುತ್ತದೆ. ಮುಂದೆ ಬರುವ ‘ಮಾಯದ ಮರ ಏರಿದ ಜಗದ ಕಲೆ’ ಮತ್ತು ‘ಸರಸ ವಿರಸದ ನಕಲಿ ಸೆಲೆ’ ಎರಡೂ ಇದಕ್ಕೆ ಹೊಂದಿಕೆಯಾಗುವಂತೆಯೇ ಇವೆ. ಆದರೆ ‘ಹಡಗು ಸೆಳೆದ ಕಡಲ ಅಲೆ’ ಯಾಗಲಿ, ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತಾಗಲಿ ಬಾದರಾಯಣ ಸಂಬಂಧದ ಎಳೆಯನ್ನಷ್ಟೇ ಉಳಿಸಿಕೊಳ್ಳುತ್ತವೆ. ಅದೆಲ್ಲವೂ ಗೌಣ ಎಂದರೂ ಈ ಇಡೀ ಚರಣ ಉದ್ದೀಪಿಸುವ ಸಂವೇದನೆ ಇಲ್ಲಿನ ಕಾಂಟ್ರಾಸ್ಟ್ನಿಂದಲೇ ಛಿದ್ರವಾಗುವಂತಿದೆ. ಇದೊಂದು ಉದಾಹರಣೆಯಷ್ಟೇ.
ನೆನಪುಗಳು, ಸ್ಮೃತಿ, ಚಿತ್ರ, ವಾಸನೆ, ಶಬ್ದ, ಸದ್ದು ಪ್ರತಿಯೊಂದಕ್ಕೂ ಒಂದು ಭಾವಸ್ಫುರಣ ಶಕ್ತಿ ಇದ್ದೇ ಇರುತ್ತದೆ. ಆದರೆ ಹಾಗೆಂದ ಮಾತ್ರಕ್ಕೆ ಕೆಲವೊಂದನ್ನು ಅಕ್ಕಪಕ್ಕದಲ್ಲಿಟ್ಟರೆ, ಅಕ್ಷರ ಒದಗಿಸುವ ಪದಬಂಧದಲ್ಲಿ ಕಟ್ಟಿಬಿಟ್ಟರೆ ಅದು ಹೊಸತೇ ಆದ ಭಾವಸ್ಫುರಣಕ್ಕೆ ಕಾರಣವಾಗುತ್ತದೆ/ಆಗಬೇಕು ಎಂದೇನಿಲ್ಲ.
‘ಮುಳ್ಳುಮೊನಿಯ ಮ್ಯಾಲೆ ಮೂರು ಕೆರೆಯ ಕಟ್ಟಿ’ ಎಂದು ಆರಂಭವಾಗುವ ಕನಕದಾಸರ ರಚನೆಯ ಬಗ್ಗೆ ನಮಗೆಲ್ಲ ಗೊತ್ತು. ಇಂಥವುಗಳನ್ನು ಮುಂಡಿಗೆಗಳು ಎಂದೇ ಕರೆದಿದ್ದಾರೆ. ಇವು ಒಂಥರಾ ಒಗಟಿನಂತೆ, ಆಧ್ಯಾತ್ಮದ ಯಾವುದೋ ಸತ್ಯವನ್ನು ಹೇಳುವ ನಿಗೂಢ ಮಾರ್ಗದಂತೆ ಇವೆ. ಅಲ್ಲಮನ ಅನೇಕ ರಚನೆಗಳಲ್ಲಿ ನಮಗೆ ಇಂಥದೇ ಅನುಭವವಾದರೆ ಅಚ್ಚರಿಯೇನಿಲ್ಲ. ಮರದೊಳಗಿನ ಕಿಚ್ಚು, ಶಬ್ದದೊಳಗಿನ ನಿಶ್ಶಬ್ದ ಎಲ್ಲ ಅಲ್ಲಮನ ಪರಿಕಲ್ಪನೆ. ಎ ಕೆ ರಾಮಾನುಜನ್ ಅವರ ರಚನೆಗಳಲ್ಲೂ ಇಂಥ ಬೆರಗು, ಹೊಸ ಬಗೆಯ ಪ್ರತಿಮೆ/ಚಿತ್ರ/ರೂಪಕ ಕಟ್ಟಿಕೊಟ್ಟು ಓದುಗನಲ್ಲಿ ಹೊಸ ಸಂವೇದನೆ ಉದ್ದೀಪಿಸುವ ಪ್ರಯತ್ನ ಕಾಣುತ್ತೇವೆ. ಎಸ್ ದಿವಾಕರ್ ಅವರು ಕೂಡ ಇಂಥ ಕೆಲವು ರಚನೆಗಳನ್ನು ಮಾಡಿದ್ದಿದೆ. ‘ಆತ್ಮಚರಿತ್ರೆಯ ಕೊನೆಯ ಪುಟ’ ಸಂಕಲನದಲ್ಲಿ ಇವುಗಳನ್ನು ಕಾಣಬಹುದು. ಕತೆಗಳ ಮಟ್ಟಿಗೆ ಬಂದರೆ ಮೊದಲಿಗೆ ನಿಲ್ಲುವ ಹೆಸರು ಎಂ ಎಸ್ ಕೆ ಪ್ರಭು. ಈಗ ಬರೆಯುತ್ತಿರುವವರಲ್ಲಿ ಎಸ್ ಸುರೇಂದ್ರನಾಥ್ ಅಂಥ ಕತೆಗಳ ಅಪ್ರತಿಮ ಸಾಧಕ. ಇವರಲ್ಲಿ ಶನಿದೆಸೆಯನ್ನು ಕೊಂಡುಕೊಳ್ಳಬಲ್ಲವರು, ಮಾರಬಲ್ಲವರು ಬರುತ್ತಾರೆ. ಅಪಾನವಾಯು ಬಿಟ್ಟರೆ ಅದು ಹಸಿರು ಬಣ್ಣದ ಬಲೂನಾಗಿ ಜಗಜ್ಜಾಹೀರಾಗುವ ನಾತಲೀಲೆ ತೊಡಗುತ್ತದೆ. ಗೋಡೆಯೊಳಗೆ ಆರಾಮಾಗಿ ಹಾಯಬಲ್ಲ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಒಂದು ದಿನ ಕಾಂಪೌಂಡ್ ಗೋಡೆಯೊಳಗೆ ಬಂಧಿಯಾಗಿ ಸಿಕ್ಕಿಕೊಂಡು ಬಿಡುತ್ತಾನೆ! ಅಲ್ಲಮ, ಕನಕನನ್ನು ಬಿಟ್ಟು ಆಧುನಿಕ ಕವಿತೆಗಳ ಮಾತಿಗೆ ಬಂದರೆ, ಒಂದು ಕವಿತೆ ತನ್ನ ಅಭಿವ್ಯಕ್ತಿಗೆ ಭಾಷೆಯನ್ನು ಹೇಗೆಯೇ ಬಳಸಿಕೊಳ್ಳಲಿ, ಅದರ ಎಲ್ಲ ಪ್ರಯತ್ನ ಒಂದು ಸಂವೇದನೆಯನ್ನು ತನ್ನ ಓದುಗನಲ್ಲಿಯೂ ಮರುಸೃಷ್ಟಿ ಮಾಡುವುದರತ್ತಲೇ ತುಡಿಯುತ್ತಿರುತ್ತದೆ ಎನ್ನುವುದು ನಿರೀಕ್ಷೆ. ಇದನ್ನೇ ‘ಕವಿಭಾವ ಪ್ರತಿಮಾ ಪುನರ್ಸೃಷ್ಟಿ’ ಎಂದಿರುವುದು. ಇದಕ್ಕೆ ನಾನಿಲ್ಲಿ ಮೊದಲಿಗೇ ವಿವರಿಸಿದ ಇತಿಮಿತಿಗಳ ತೊಡಕುಗಳೆಲ್ಲ ಇವೆ. ಹಾಗಾಗಿ ಕವಿಯ ಮುಂದಿರುವ ಸವಾಲೂ ದೊಡ್ಡದೇ.
ಇನ್ನು ಈ ತುಂಡು ತುಂಡು ಪದಗುಚ್ಛಗಳು/ಸಾಲುಗಳು ಒಡ್ಡುವ ಇನ್ನೂ ಒಂದು ತೊಡಕಿದೆ. ಇವು ಹಿಂದೂಸ್ಥಾನೀ ರಾಗದ ಒಂದು ಸುದೀರ್ಘ ಆಲಾಪದ ಅನುಭವ ಕೊಡದೆ ಫಾಸ್ಟ್ ಬೀಟ್ ಸಂಗೀತದ ಅನುಭವವನ್ನು ಕೊಡುತ್ತಿರುತ್ತವೆ. ಹೊಸ ತಲೆಮಾರಿನ ಮಾತು ಹೇಗೋ, ನನ್ನ ತಲೆಮಾರಿನವರಿಗಂತೂ ಇದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ಚುಟುಕುಗಳ ಅನುಭವವನ್ನು ಕೊಡುವುದರೊಂದಿಗೇ, ಇಲ್ಲಿ ಒಂದು ಪ್ರತಿಮೆ/ಚಿತ್ರ/ನೋಟ/ಭಾವ ಒಂದಿಷ್ಟು ಕಾಲ ಮುಂದುವರಿಯದೇ, ಥಟ್ಟನೇ ಬೇರೊಂದು ಚಿತ್ರ/ಪ್ರತಿಮೆ/ಭಾವ ಆವಾಹಿಸಿ ಕಂಗಾಲುಗೊಳಿಸುವಂತಾಗುತ್ತದೆ. ಇದಕ್ಕೆ ಇದರದ್ದೇ ಆದ ರಿದಂ ಇದ್ದೇ ಇದೆ, ಇಲ್ಲವೆಂದಲ್ಲ. ಕಾಲಧರ್ಮ ಮತ್ತು ಮನೋಧರ್ಮಕ್ಕನುಗುಣವಾಗಿ ಇದು ಬಹುಶಃ ಹೆಚ್ಚು ಸಮಕಾಲೀನ ರಿದಂ ಎಂದೇ ಎನಿಸುತ್ತದೆ. ಬಹುಶಃ ಇವತ್ತು ಸುದೀರ್ಘಾವಧಿಗೆ ಒಂದು ನಿರ್ದಿಷ್ಟ ಪ್ರತಿಮೆ/ಭಾವ/ಚಿತ್ರದೊಂದಿಗೆ ನಿಲ್ಲಬಲ್ಲ ತಾಳ್ಮೆಯೇ ಕ್ಷಣಕ್ಷಣಕ್ಕೂ, ಬೆರಳು ಸ್ವೀಪ್ ಮಾಡಿದಂತೆಲ್ಲ ಹೊಸತನ್ನು ಒದಗಿಸುತ್ತಿರುವ ಫೇಸ್ಬುಕ್, ಇನ್ಸ್ಟಾಗ್ರಾಮ್ ಸಂಸ್ಕೃತಿಗೆ ನಿಲುಕದ ವಿಚಾರವಿರಬಹುದು. We sweep everything.
ಕೊನೆಯದಾಗಿ, ಮೇಲೆ ಹೇಳಿರುವಂತೆ ನೆನಪುಗಳು, ಸ್ಮೃತಿ, ಚಿತ್ರ, ವಾಸನೆ, ಶಬ್ದ, ಸದ್ದು ಪ್ರತಿಯೊಂದಕ್ಕೂ ಒಂದು ಭಾವಸ್ಫುರಣ ಶಕ್ತಿ ಇರುತ್ತದೆ. ಒಂದು ಪದ, ಒಂದು ಶಬ್ದ, ಒಂದು ಸದ್ದು ಕವಿಗೆ ಅನನ್ಯ ಎನಿಸಬೇಕು. ಹಾಗಾಗಿ ಕವಿತೆಗಳಲ್ಲಿ ಮುದ್ರಣದೋಷ ಉಳಿಯದಂತೆ ಎಚ್ಚರ ವಹಿಸಬೇಕು. ನನಗೆ ಕನಿಷ್ಠ ಮೂರು ಮುದ್ರಣದೋಷಗಳು (ಹಾಗಂತ ಅಂದುಕೊಂಡಿರುವೆ) ಸಿಕ್ಕಿವೆ. ‘ಬಿಸಿಲು ತೊಟ್ಟವರು’ ಕವಿತೆಯಲ್ಲಿ ಕುಲಾಯಿ ಹೆಣೆದು ಅಂತ ಆಗಿದೆ. ಅದು ಕುಲಾವಿ ಆಗಬೇಕು. ‘ಸಾಕಿ’ ಕವಿತೆಯಲ್ಲಿ ನನ್ನೊಡಲ ಜೀವದೊರೆತಗಳೆಲ್ಲ ಎಂದಿರಬೇಕಿತ್ತು. ಅನೇಕ ಕಡೆ ನಿಶ್ಶಬ್ದ ಎನ್ನುವುದು ನಿಶಬ್ದ ಆಗಿದೆ. ಇದೆಲ್ಲ ಹೋಗಲಿ ಎಂದರೆ ನನಗೆ ಬಂದಿರುವ ಪ್ರತಿಯಲ್ಲಿ ಎಂಟು ಪುಟಗಳು ಅಚ್ಚಾಗಿಯೇ ಇಲ್ಲ! ಇದನ್ನು ಹೇಗೆ ಸಹಿಸುವುದೋ ಯಾರಿಗೆ ಗೊತ್ತು...
ಸುಮಿತ್ ಮೇತ್ರಿಯವರಲ್ಲಿ ಒಬ್ಬ ಕವಿಯಿದ್ದಾನೆ ಮತ್ತು ನನಗನಿಸುವಂತೆ ಒಬ್ಬ ಕವಿಗೆ ಅಗತ್ಯವಾದ ಮೌನ, ಧ್ಯಾನ ಮತ್ತು ಏಕಾಂತದ ಸಾಂಗತ್ಯವೂ ಅವರಲ್ಲಿದೆ. ಅವರ ಭಾಷಾಜ್ಞಾನ ಮತ್ತು ಭಾಷಾಶುದ್ಧಿ ತುಂಬ ಮೇಲ್ಮಟ್ಟದ್ದಿದೆ. ಹಾಗಿದ್ದೂ ನನಗೇಕೋ ಅವರು ತಮ್ಮೊಳಗಿನ ಕವಿಗೆ ಕೊಟ್ಟುಕೊಳ್ಳುವ ಸಮಯ ಸ್ವಲ್ಪ ಕಡಿಮೆಯಾದಂತೆ ಕಂಡಿದೆ. ಇಡೀ ಸಂಕಲನದಲ್ಲಿ ನನಗಿಷ್ಟವಾದ ಕವಿತೆ ‘ಮಧುರ ನೆಲ’ ಮತ್ತು ಆ ಸಾಲಿಗೇ ಸಲ್ಲುವ ಸಂಕಲನದ ಇನ್ನಿತರ ಕೆಲವು ಕವಿತೆಗಳು. ಈ ಕವಿತೆಗಳಲ್ಲಿ ಶಬ್ದಜಾಲವಿಲ್ಲ, ಮೇಲ್ನೋಟಕ್ಕೆ ಅವು ತುಂಬ ಸರಳ ರಚನೆಗಳು ಅನಿಸಬಹುದು. ಆದರೆ ಆ ಸರಳ ಪದಗಳು ಕವಿತೆಯಲ್ಲಿ ಇರುವ ಮೌನ ಮತ್ತು ಅದರಿಂದಾಗಿಯೇ ಆ ಕವಿತೆಗಳಿಗೆ ದಕ್ಕಿರುವ ಒಂದು ಕೆಲಕಾಲ ಕಾಡಬಲ್ಲ ಭಾವತೀವ್ರತೆಯ ಶಕ್ತಿ ನನಗೆ ಮೆಚ್ಚು. ಭಾವ ಸಂವೇದನೆಗಳಿರುವ ಕವಿತೆಗಳಷ್ಟೇ ಒಳ್ಳೆಯ ಕವಿತೆಗಳೆಂದೇನಲ್ಲ. ನವರಸಗಳನ್ನೂ ಕವಿತೆ ದುಡಿಸಿಕೊಳ್ಳಬಲ್ಲದು ಎನ್ನುವುದು ನಿಜವೇ. ಆದರೆ ಸಾಮಾನ್ಯವಾಗಿ ಒಂದು ಕವಿತೆ ಒಮ್ಮೆಗೆ ಒಂದೇ ರಸವನ್ನು ನೆಚ್ಚಿಕೊಂಡು ಹೊರಡುತ್ತದೆ. ಕೆಲವೊಂದು ಕವಿತೆಗಳು ಎರಡು ಮೂರು ರಸವನ್ನು ಸ್ಫುರಿಸಿದರೂ ಅವು ಒಂದು ಇನ್ನೊಂದಕ್ಕೆ ಪೂರಕವಾಗಿ, ಒಂದು ಇನ್ನೊಂದರ ಬೆಳವಣಿಗೆಯಾಗಿ ಬರುತ್ತವೆಯೇ ಹೊರತು ಏಕಕಾಲದ ಕಾಂಟ್ರಾಸ್ಟ್ ಆಗಿ ಬರುವುದು ಕಡಿಮೆ. ಹಾಗಾಗಿಯೇ ಕವಿತೆಗೆ ಕ್ಷಣಭಂಗುರತೆಯೂ, ಆ ಕ್ಷಣಭಂಗುರತೆಯೇ ಅದರ ಅದಮ್ಯ ಆಕರ್ಷಣೆ ಮತ್ತು ತೀವ್ರತೆಯೂ ಆಗಿ ಅದಕ್ಕೆ ಒದಗುತ್ತಿರುತ್ತದೆ. ಸುಮಿತ್ ಮೇತ್ರಿ ಈ ಸಂಕಲನದಲ್ಲಿ ಎರಡೂ ಬಗೆಯ ರಚನೆಗಳನ್ನು ಸಂಕಲಿಸಿದ್ದಾರೆ. ಎರಡರಲ್ಲೂ ಅವರು ಯಶಸ್ವಿಯಾಗಿದ್ದಾರೆ ಕೂಡ. ಅವರ ಇನ್ನೊಂದು ಬಗೆಯ ಕವಿತೆಗಳಲ್ಲಿ ನನಗಿಷ್ಟವಾದ ಕವಿತೆಗಳು ತುಂಬ ಇವೆ. ಹೆಚ್ಚಿನವು ಕೇಶವ ಮಳಗಿ ಮತ್ತು ಕೆ ವಿ ತಿರುಮಲೇಶ್ ಅವರಿಗೂ ಇಷ್ಟವಾಗಿ, ಅವರೂ ಅವುಗಳನ್ನು ಉಲ್ಲೇಖಿಸಿರುವುದರಿಂದ ನಾನು ಮತ್ತೆ ಅವುಗಳನ್ನೇ ಕೋಟ್ ಮಾಡುವುದು ಬೇಡ ಅನಿಸುತ್ತದೆ. ‘ಚಕ್ರದ ಹಡಗು’ ಕವಿತೆಯ ಒಂದು ಚರಣ ಸುಮಿತ್ ಮೇತ್ರಿಯವರ ಪ್ರತಿಭೆಗೆ ಒಳ್ಳೆಯ ಉದಾಹರಣೆಯಂತಿರುವುದರಿಂದ ಅದನ್ನಿಲ್ಲಿ ಕೊಡುತ್ತಿದ್ದೇನೆ:
ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು
ಆಳ ಕಾಣದ
ಕಗ್ಗಾಡಿನ ಒಳಗೆ ಝೀಂಗುಡುವ
ನಿಗೂಢತೆಗೆ ಮೌನ ತಬ್ಬಿ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.
- ಈ ಕವಿತೆಯನ್ನು ಸೂಕ್ಷ್ಮವಾಗಿ ಗಮನಿಸಿ.
ಪತ್ರಿಕೆಯಲ್ಲಿ ಅಚ್ಚಾಗಿವೆ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.
- ಎಂದು ಇದನ್ನು ಓದಬಹುದು. ಅಥವಾ,
(ನದಿಗಳಿಗೆ ಹರಿಯ ಬಿಡುವ ಕೊಳಚೆ ನೀರಿನ ನೆನಪು ತರುವ) ಸಿಂಗಾರಗೊಂಡ ಕಪ್ಪು ನದಿಗಳು
(ಅದಕ್ಕೇ ಜೋಡಿಕೆಯಾಗುವ) ಆಳ ಕಾಣದ (ಎಂಬ ಶಬ್ದ)
ಸಿಂಗಾರಗೊಂಡ ಆಳ ಕಾಣದ ಕಪ್ಪು ನದಿಗಳು (ಎಂದೂ ಓದಬಹುದು)
ಅಥವಾ,
ಪತ್ರಿಕೆಯಲ್ಲಿ ಅಚ್ಚಾಗಿವೆ
ಆಳ ಕಾಣದ ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು
- ಎಂದೂ ಓದಬಹುದು. ನದಿಗಳು ಪತ್ರಿಕೆಯಲ್ಲಿ ಅಚ್ಚಾಗುವುದು, ಒಂದು ರೂಪಕವಾಗಿ ಚೆನ್ನಾಗಿದೆ.
ಝೀಂಗುಡುವ ನಿಗೂಢತೆಗೆ ಮೌನ ತಬ್ಬಿ - ಎನ್ನುವ ಸಾಲು ಇಡೀ ಚರಣಕ್ಕೆ ಕೇಂದ್ರದಂತೆ ಒದಗುವ ಪರಿ ಕೂಡ ಅನನ್ಯವಾದುದು.
ಹೀಗೆ ಅನೇಕ ಕಡೆಗಳಲ್ಲಿ ಸುಮಿತ್ ಮೇತ್ರಿಯವರ ಕವಿತೆಗಳನ್ನು ನಾವು ನಿಧಾನವಾಗಿ, ತಾಳ್ಮೆಯಿಂದ ದಕ್ಕಿಸಿಕೊಳ್ಳಬೇಕಾಗುತ್ತದೆ ಎನ್ನುವುದು ನಿಜ. ಇವರು ಮಹತ್ವಾಕಾಂಕ್ಷೆಯ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಆಗಸಕ್ಕೆ ಕೈಚಾಚಿದ್ದಾರೆ, ಅವರಿಗೆ ಬಾಚಿಕೊಳ್ಳುವಷ್ಟು ಸಿಗಲಿ ಎಂದು ಹಾರೈಸುತ್ತ ಅವರ ಮುಂದಿನ ಸಂಕಲನಕ್ಕಾಗಿ ಕಾಯುವೆ...